ಶಿವಮೊಗ್ಗ : ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವಿಭಾಗದ ವತಿಯಿಂದ ಆಗಸ್ಟ್ 26 ರಿಂದ ಸೆಪ್ಟೆಂಬರ್ 6 ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕರಾದ ಜನಾಬ್ ಅಕ್ರಮುಲ್ಲ ಶರೀಫ್ ಹೇಳಿದರು
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆಯಡಿಯಲ್ಲಿ ಈ ಅಭಿಯಾನ ನಡೆಯಲಿದ್ದು, ಪ್ರವಾದಿಯವರ ಸಂದೇಶಗಳನ್ನು ಕನ್ನಡ ಜನತೆಗೆ ತಲುಪಿಸುವುದು, ಸಮಾಜದಲ್ಲಿನ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಪರಸ್ಪರ ಸೌಹಾರ್ದ ಮತ್ತು ಬಾಂಧವ್ಯಗಳನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು
ಪ್ರವಾದಿ ಮುಹಮ್ಮದ್ ರವರು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ ಹಾಗೂ ಏಕತೆಯ ತತ್ವಗಳ ಮೇಲೆ ಸಮಗ್ರ ಕ್ರಾಂತಿಯನ್ನು ತಂದಿದ್ದರು. ಅವರ ಸಂದೇಶಗಳು ಜನರ ಮನಸ್ಸನ್ನು ಸಂಸ್ಕರಿಸಿ, ನೈತಿಕ ಮತ್ತು ಚಾರಿತ್ರಿಕ ಪರಿವರ್ತನೆಗೆ ಕಾರಣವಾದವು. ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ ಹಾಗೂ ಆಡಳಿತ ರಂಗಗಳನ್ನು ಬೆಳಗಿಸಿದ ಅವರ ಕ್ರಾಂತಿಯ ಮುಖ್ಯ ಗುರಿ ಸುಭಿಕ್ಷ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣವಾಗಿತ್ತು ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ಅವರು ರಚಿಸಿದ ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್(ಸ) ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅವರ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮಗಳು, ಸೀರತ್ ಪ್ರವಚನ, ಎಕ್ಸಿಬಿಷನ್, ಸೌಹಾರ್ದ ಸಂದೇಶ ರ್ಯಾಲಿ ಹಾಗೂ ಸಮಾಜಸೇವಾ ಚಟುವಟಿಕೆಗಳು ಜರುಗಲಿವೆ.ಶಿವಮೊಗ್ಗ ಹಾಗೂ ಸ್ಥಾನೀಯ ಮಟ್ಟದಲ್ಲಿ ಅಂತರ್ಧರ್ಮೀಯ ಸಂವಾದ, ಪ್ರಬಂಧ ಸ್ಪರ್ಧೆಗಳು, ರಕ್ತದಾನ ಶಿಬಿರ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಭೇಟಿ ಮತ್ತು ವೃದ್ಧಾಶ್ರಮಗಳ ಭೇಟಿ ಮುಂತಾದ ಮಾನವೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು
