ಶಿವಮೊಗ್ಗ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತರು ರೇಡ್​ ನಡೆಸಿದ್ದೇಕೆ ತಿಳಿಯಿತಾ!? ಇಲ್ಲಿದೆ ಕಾರಣ

Tahsildar office / ಮಲೆನಾಡು ಟುಡೆ ಶಿವಮೊಗ್ಗ / ನಿನ್ನೆ ಅಂದರೆ ಜೂನ್ 24 ರ ಬುಧವಾರ ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ರೇಡ್ ನಡೆಸಿದ್ದರು. ಗಂಟೆಗೂ ಅಧಿಕ ಕಾಲ ಸ್ಥಳದಲ್ಲಿ ಪರಿಶೀಲಿಸಿದ್ದ ಲೋಕಾಯುಕ್ತ ಪೊಲೀಸರು ವಿವಿಧ ದಾಖಲೆಗಳನ್ನು ತಡಕಾಡಿದ್ದರು. ಇದೀಗ ಲೋಕಾಯುಕ್ತ ಪೊಲೀಸರ ಈ ರೇಡ್​ನ ಹಿಂದಿನ ಕಾರಣ ಪತ್ತೆಯಾಗಿದೆ. ತಾಲ್ಲೂಕಿನ ಅಗಸವಳ್ಳಿ ಪಂಚಾಯಿತಿ ವ್ಯಾಪ್ತಿಯ ಗೋವಿಂದಪುರದಲ್ಲಿ 12 ಎಕರೆ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾಡಿ ಹಂಚಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಗೋವಿಂದಾಪುರದಲ್ಲಿ ₹ 20 ಕೋಟಿ ಮೌಲ್ಯದ ಸರ್ಕಾರಿ ಜಾಗವಿದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಅಗಸವಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಮಾಡಲಾಗಿದೆ ಎಂಬುದು ಮುಖ್ಯ ಆರೋಪ 12 ಎಕರೆ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟವನ್ನೆ ಮಾಡಲಾಗಿದ್ದು, ಈ ಅಕ್ರಮದಲ್ಲಿ ಮಧ್ಯವರ್ತಿಗಳು ಇದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಂಗಳವಾರ ಗ್ರಾಮ ಪಂಚಾಯಿತಿ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ನಿನ್ನೆ ಬುಧವಾರ ಶಿವಮೊಗ್ಗದ ತಹಶಿಲ್ದಾರ್​ ಕಚೇರಿಯಲ್ಲಿ ದಾಖಲೆಗಳ ವಶಪಡಿಸಿಕೊಂಡರು.

ಈಗಾಗಲೇ ಗೋವಿಂದಾಪುರದಲ್ಲಿ 5 ಎಕರೆ, 6 ಎಕರೆ ಹಾಗೂ 1.20 ಎಕರೆ ಬೇರೆ ಬೇರೆ ಕಡೆ ಸರ್ಕಾರಿ ಜಾಗ ಇದ್ದು, ಅವುಗಳನ್ನು ನಿವೇಶನಗಳಾಗಿ ಮಾಡಿ 33 ಮಂದಿಗೆ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮಾರಾಟ ಮಾಡಲು ಸಿದ್ಧತೆ ನಡೆದಿತ್ತು. ಸರ್ಕಾರಿ ಜಾಗವನ್ನು ತಹಶೀಲ್ದಾರ್ ಉಳಿಸಿಕೊಳ್ಳಬೇಕಿತ್ತು. ಅದು ಆಗಿಲ್ಲ. ಹೀಗಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ದಾಖಲೆಗಳ ಪಡೆದು ತನಿಖೆ ಮುಂದುವರೆಸಲಾಗಿದೆ

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಮೂಲ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw