ಭ್ರಷ್ಟಾಚಾರಕ್ಕೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ, ಸಿಎಂ ಮಾತು ಜನರಿಗೆ ಹಾಸ್ಯಾಸ್ಪದ: ಶಿವಮೊಗ್ಗದಲ್ಲಿ ಬಿ.ವೈ.ವಿಜಯೇಂದ್ರ ವಾಗ್ದಾಳಿ!

Vijayendraಶಿವಮೊಗ್ಗ | ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆಯಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹೇಳಿರುವುದು ರಾಜ್ಯದ ಜನರಿಗೆ ಅತ್ಯಂತ ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಭ್ರಷ್ಟಾಚಾರಕ್ಕೂ ಮತ್ತು ಕಾಂಗ್ರೆಸ್ ಸರ್ಕಾರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. 

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಾಯಲ್ಲಿ ಪ್ರಾಮಾಣಿಕತೆಯ ಮಾತುಗಳು ಬರುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಸರ್ಕಾರ ಕಳೆದ 3 ವರ್ಷಗಳಲ್ಲಿ ಜನರ ಅಪೇಕ್ಷೆಯಂತೆ ಆಡಳಿತ ನೀಡದೆ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರದಲ್ಲಿ ಇರುವಷ್ಟೂ ದಿನವಾದರೂ ಒಳ್ಳೆಯ ಆಡಳಿತ ಕೊಡಲಿ ಎಂದರು.

 ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುತ್ತಾರೋ ಇಲ್ಲವೋ ಎಂಬ ದೊಡ್ಡ ಪ್ರಶ್ನೆ ಎದ್ದಿತ್ತು. ಆದರೆ, ಡಿ.ಕೆ.ಶಿವಕುಮಾರ್ ಅವರು ಸಮಾಧಾನ ಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿ ಆಡಳಿತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಈ ತಾಳ್ಮೆಯ ನಡೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಚುನಾವಣೆ ವೇಳೆ ಯಾವುದೇ ಮಾನದಂಡವಿಲ್ಲದೇ ರಾಜ್ಯದ ಪ್ರತಿ ಮಹಿಳೆಗೆ ಗೃಹಲಕ್ಷ್ಮಿ ಸೇರಿದಂತೆ ಹತ್ತಾರು ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ, ಈಗ ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೆ, ಫಲಾನುಭವಿಗಳ ಮೇಲೆಯೇ ಆರೋಪ ಹೊರಿಸಿ ಲಕ್ಷಾಂತರ ಜನರನ್ನು ಕಡಿತಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು. 

ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ಇಂತಹದ್ದೇ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈಗ ಕರ್ನಾಟಕ ಕೂಡ ಅದೇ ದಾರಿಯಲ್ಲಿ ಬಂದು ನಿಂತಿದ್ದು, ಒಂದೊಂದೇ ಕುಂಟು ನೆಪವೊಡ್ಡಿ ಗ್ಯಾರಂಟಿಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ 50-55 ವರ್ಷ ಆಡಳಿತ ನಡೆಸಿದರೂ ಇಂದಿಗೂ ಜನ ತಮ್ಮ ಉಚಿತಗಳಿಗಾಗಿ ಕೈಚಾಚುವಂತೆ ಮಾಡಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಚುನಾವಣೆ ವೇಳೆ ರಾಜ್ಯದ ಜನ ಬಂದು ಗ್ಯಾರಂಟಿ ಕೊಡಿ ಎಂದು ಕೇಳಿರಲಿಲ್ಲ, ನೀವೇ ಆಸೆ ತೋರಿಸಿ ಈಗ ಫಲಾನುಭವಿಗಳಿಗೆ ಅಪಮಾನ ಮಾಡುತ್ತಿದ್ದೀರಿ. ಮುಖ್ಯಮಂತ್ರಿಗಳು ರಾಜ್ಯದ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಜನರ ಮುಂದೆ ಬಹಿರಂಗ ಸತ್ಯವನ್ನು ಒಪ್ಪಿಕೊಂಡು, ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಬಿಡದಿ ಕೈಗಾರಿಕಾ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಸರ್ಕಾರದ ಅಕ್ಷಮ್ಯ ಅಪರಾಧ. ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸುವಾಗ ಕನಿಷ್ಠ ಶೇ. 60 ರಿಂದ 70 ರಷ್ಟು ರೈತರು ಒಪ್ಪಬೇಕು ಎಂಬ ನಿಯಮವಿದೆ. ಆದರೆ ಬಿಡದಿಯಲ್ಲಿ ಶೇ. 90 ರಷ್ಟು ರೈತರು ಕಠಿಣ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಸರ್ಕಾರ ಬಲವಂತವಾಗಿ ಅವರ ಜಮೀನನ್ನು ಕಸಿದುಕೊಳ್ಳಲು ಸಂಚು ಹೂಡಿದೆ. ದೇಶಾದ್ಯಂತ ಪ್ರವಾಸ ಮಾಡಿ ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮೊದಲು ತಮ್ಮದೇ ಮುಖ್ಯಮಂತ್ರಿಗಳಿಗೆ ಬುದ್ಧಿ ಹೇಳಿ ಈ ಬಲವಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಲು ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.

Vijayendra Slams CM Over Corruption