ಆಗುಂಬೆ ಘಾಟಿಯಲ್ಲಿ 15 ಕೋಟಿಯ ಬೇಲಿ! ಏನಿದು ಮೆಗಾ ಪ್ರಾಜೆಕ್ಟ್ ಡಿಟೇಲ್ಸ್!

Agumbe Ghat / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಆಗುಂಬೆ ಘಾಟಿಯಲ್ಲಿ, ಭೂಕುಸಿತ ತಡೆಯುವ ನಿಟ್ಟಿನಲ್ಲಿ ರಸ್ತೆಯ ತಿರುವುಗಳ ಬದಿಯಲ್ಲಿ ಸುಮಾರು 1000 ಮೀಟರ್ ಉದ್ದದ ತಡೆಬೇಲಿಯನ್ನು ನಿರ್ಮಿಸಲು ಪ್ಲಾನ್ ಮಾಡಲಾಗಿದೆ.. ಈ ಸಂಬಂಧ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚನೆ ನೀಡಿದ್ದಾರೆ. ಘಾಟಿ ಮಾರ್ಗದ ರಸ್ತೆ ದುರಸ್ತಿಗಾಗಿ ಈಗಾಗಲೇ 15 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಗುಂಬೆ ಘಾಟಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಹಾಗೂ ಕೆಲವೊಂದು ಹೇರ್​ ಪಿನ್​ ತಿರುವುಗಳಲ್ಲಿ ರಸ್ತೆಯ ಅಂಚು ಕುಸಿದಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೂಡಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು.

ಹುಲಿಕಲ್ ಘಾಟಿಯಲ್ಲಿ ವೆಹಿಕಲ್​ ಬ್ಯಾನ್​ ಮಾಡಿದ ಬಳಿಕ ಆಗುಂಬೆ ಘಾಟಿಯಲ್ಲಿ ವಾಹನಗಳ ಓಡಾಟ ವಿಪರೀತವಾಗಿದೆ. ಈ ಮಧ್ಯೆ ಕೆಲವೊಂದು ಹೆವಿ ವೆಹಿಕಲ್​ಗಳು ಸಹ ಓಡಾಡುತ್ತಿವೆ. ಇದರಿಂಧ ಘಾಟಿಯಲ್ಲಿ ಧರೆ ಕುಸಿಯುವ ಆತಂಕವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಂಡು ತಿರುವುಗಳ ಅಂಚಿನಲ್ಲಿ ತಡೆಬೇಲಿಗಳನ್ನು ನಿರ್ಮಿಸುವಂತೆ ಸೂಚಿಸಿದರು. ಮಳೆಗಾಲ ಪೂರ್ಣಗೊಂಡ ನಂತರ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಆಗುಂಬೆ ಘಾಟಿಯಲ್ಲಿ ಪದೇ ಪದೇ ಎದುರಾಗುತ್ತಿರುವ ಭೂಕುಸಿತ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರು ಸಲ್ಲಿಸಿದ್ದ ಪ್ರಸ್ತಾವನೆಯ ಆಧಾರದ ಮೇಲೆ, ಈ ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಾಣ ಹಾಗೂ ಹಾಲಿ ಇರುವ ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಸಾಧಕ-ಬಾಧಕಗಳ ವರದಿಯನ್ನು ಆಧರಿಸಿ ಮುಂದಿನ 2 ವಾರಗಳ ಒಳಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಭಾಗೀಯ ಅಧಿಕಾರಿಯಾದ ಶ್ರೀಧರ್ ಅವರಿಗೆ ನಿರ್ದೇಶನ ನೀಡಲಾಗಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ

ಸಂಸದರ ಈ ಭೇಟಿಯ ಸಂದರ್ಭದಲ್ಲಿ ಆಗುಂಬೆ ವನ್ಯಜೀವಿ ವಲಯದ ಅಮಾವಾಸ್ಯೆ ಬೈಲು ವಲಯ ಅರಣ್ಯಾಧಿಕಾರಿ ರೂಪೇಶ್ ಚೌವ್ಹಾಣ್, ಸೋಮೇಶ್ವರ ವನ್ಯಜೀವಿ ವಲಯದ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತರಾದ ನವೀನ್ ಹಾಗೂ ಸಹಾಯಕ ಶಶಿಧರ್ ಜೋಯಿಸ್ ಅವರು ಉಪಸ್ಥಿತರಿದ್ದು, ಘಾಟಿಯ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಒದಗಿಸಿದರು.

Whatsapp / https://chat.whatsapp.com/JrsZ8He4nN600n0r3tJItz