ಶಿವಮೊಗ್ಗ: ಇಂಜಿನಿಯರ್ ಗೆಳೆಯರ ತಂಡವೊಂದು ಸಿದ್ಧಪಡಿಸಿರುವ ಮರಳಿ ಮನಸ್ಸಾಗಿದೆ ಎಂಬ ಸಿನಿಮಾ ಇದೇ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರದ ಅವರು, ಪ್ರೀತಿಯ ಸುಂದರ ಭಾವನೆಗಳ ಎಳೆಯನ್ನು ಇಟ್ಟುಕೊಂಡು ಸುಮಾರು 3 ವರ್ಷಗಳ ಸುದೀರ್ಘ ಪರಿಶ್ರಮದ ನಂತರ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದು ತಿಳಿಸಿದರು. ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ನಾಳೆ ರಾಜ್ಯದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ.
ಈ ಚಿತ್ರದಲ್ಲಿ ಪುತ್ತೂರಿನ ಅರ್ಜುನ್ ವೇದಾಂತ್ ನಾಯಕನಾಗಿ ಮತ್ತು ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಕರಾವಳಿಯ ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಜೂರು, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಹಿರಿಯ ನಟರಾದ ಟಿ.ಎಸ್. ನಾಗಾಭರಣ, ಸೀರುಂಡೆ ರಘು ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಸಾಥ್ ನೀಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನಾಗರಾಜ್ ಶಂಕರ್ ಹೊತ್ತಿದ್ದು, ಅವರಿಗೆ ಆಶಿತ್ ಸುಬ್ರಮಣ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮುದೇಗೌಡ್ರು ನವೀನ್ ಕುಮಾರ್, ತೆಲಿಗಿ ಮಲ್ಲಿಕಾರ್ಜುನಪ್ಪ, ಆಶಿತ್ ಸುಬ್ರಮಣ್ಯ ಮತ್ತು ನಾಗರಾಜ್ ಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನು ಮನಸು ಅವರ ಸಂಗೀತ ಹಾಗೂ ಹಾಲೇಶ್ ಎಸ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಈ ಚಿತ್ರವನ್ನು ಸಿನಿ ಪ್ರೇಮಿಗಳು ಬೆಂಬಲಿಸಬೇಕೆಂದು ಚಿತ್ರತಂಡ ಮನವಿ ಮಾಡಿದೆ.
Marali Manassagide Movie Release on Feb 12


