ಮಲೆನಾಡು ಟುಡೆ ಸುದ್ದಿ / ಸಾಗರ: ಇತ್ತೀಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾಗರ ತಾಲೂಕಿನ ತುಮರಿ ಸಮೀಪದ ಬೆಳಮಕ್ಕಿ ಮೂಲದ ಯುವತಿ ವಾಣಿಶ್ರೀ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಪ್ರಕರಣದ ನಿಸ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿ ಕರೂರು ಹೋಬಳಿಯ ನಾಗರಿಕರು ತುಮರಿ ಮುಖ್ಯ ವೃತ್ತದಲ್ಲಿ ಕ್ಯಾಂಡಲ್ ಬೆಳಗಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ದುರಂತ ಸಂಭವಿಸಿ ಬರೋಬ್ಬರಿ ಆರು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಹನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ಮಾತನಾಡಿದ ಸ್ಥಳೀಯರೊಬ್ಬರು, ಮೃತಪಟ್ಟ ಹೆಣ್ಣುಮಗಳ ನಡತೆ ಮತ್ತು ಕ್ಯಾರೆಕ್ಟರ್ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು. ಹೆಣ್ಣುಮಕ್ಕಳಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ ಹಕ್ಕು ಯಾರಿಗೂ ಇಲ್ಲ, ಪ್ರಕರಣದಿಂದ ಬಚಾವಾಗಲು ಆಕೆಯ ಮೇಲೆ ಆರೋಪ ಹೊರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ವ್ಯಕ್ತಿಯೊಬ್ಬರು ತಾನು ಸಾಯುವ ಅಂತಿಮ ಕ್ಷಣದಲ್ಲಿ ಬರೆಯುವ ಡೆತ್ ನೋಟ್ ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ. ಸಾವು ಎದುರಾದಾಗ ಯಾರೂ ಸುಳ್ಳು ಬರೆಯುವುದಿಲ್ಲ ಎಂಬುದನ್ನು ದೇಶದ ಕಾನೂನು ಸ್ಪಷ್ಟವಾಗಿ ನಂಬುತ್ತದೆ. ಮೃತಳ ಡೆತ್ ನೋಟ್ ಸತ್ಯವನ್ನು ಹೇಳುತ್ತಿದ್ದು, ಆರೋಪಿಗಳು ನಿರಪರಾಧಿಗಳಾಗಿದ್ದರೆ ತನಿಖಾಧಿಕಾರಿಗಳ ಎದುರು ಸಾಬೀತುಪಡಿಸಲಿ. ಅದನ್ನು ಬಿಟ್ಟು ಮೃತರ ಕುಟುಂಬದ ನೋವಿನ ಮೇಲೆ ಸವಾರಿ ಮಾಡಬಾರದು ಎಂದು ಎಚ್ಚರಿಸಿದರು
ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಬಂಧಿಸಿ ಜೈಲಿಗಟ್ಟಬೇಕು, ನಮಗೆ ನ್ಯಾಯ ಮಾತ್ರ ಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದರು. ಈ ವೇಳೆ ಮೃತ ವಾಣಿಶ್ರೀ ಸಹೋದರಿ ಪೂಜಾ, ತಂದೆ ಲಕ್ಷ್ಮಣ ಹಾಗೂ ಸತ್ಯನಾರಾಯಣ ಜಿ.ಟಿ., ದರ್ಶನ್ ತುಮರಿ, ರವಿ ಬೆಳಮಕ್ಕಿ ಸೇರಿದಂತೆ ಕರೂರು ಹೋಬಳಿಯ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
