SHIVAMOGGA | Jan 27, 2024 | ಮುಂಬರುವ ಸಂಸತ್ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಮಾಡಿಕೊಳ್ತಿದೆ. ಅದರಲ್ಲಿಯು ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಂದು ಗೆಲುವಿಗೆ ಅದಾಗಲೇ ತಯಾರಿ ಆರಂಭಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷ ಕೂಡ ಶಿವಮೊಗ್ಗದಲ್ಲಿ ಈ ಸಲ ಅಭಯ ಹಸ್ತದ ಗೆಲುವು ನೋಡಬೇಕು ಎಂಬ ಮಾತನ್ನು ಆಡುತ್ತಿದೆ. ಈ ನಡುವೆ ಕಾಂಗ್ರೆಸ್ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಬಿಜೆಪಿಯ ಎಂಪಿ ಬಿ.ವೈ.ರಾಘವೇಂದ್ರರಿಗೆ ಬಹುಪರಾಕ್ ಹೇಳಿದ್ದು ಅವರನ್ನು ಗೆಲ್ಲಿಸುವಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ

ಹೌದು, ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸುವಂತೆ ಶಾಮನೂರು ಶಿವಶಂಕರಪ್ಪರವರು ಕರೆಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಿನ್ನೆ ಬೆಕ್ಕಿನ ಕಲ್ಮಠದಲ್ಲಿ ನಡೆದ ಗುರು ಬಸವಶ್ರೀ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿ.ವೈ.ರಾಘವೇಂದ್ರ ಅವರಂತಹ ಲೋಕಸಭ ಸದಸ್ಯರನ್ನುಪಡೆದ ನೀವೇ ಧನ್ಯರು ಎಂದಿದ್ದಾರೆ
ಗುರು ಬಸವಶ್ರೀ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಬಿ.ವೈ.ರಾಘವೇಂದ್ರರವರು ಮುನ್ನಡೆಯುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಮೊದಲ ಆದ್ಯತೆ. ಆ ನಿಟ್ಟಿನಲ್ಲಿ ಜನರ ಅಭಿಲಾಷೆಯಂತೆ ಸಂಸದರು ಕೆಲಸ ಮಾಡಿದ್ದಾರೆ. ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲಿಸಬೇಕು ಎಂದಿದ್ಧಾರೆ ಸದ್ಯ ಶಾಮನೂರು ಶಿವಶಂಕರಪ್ಪರವರ ಮಾತು ಕಾಂಗ್ರೆಸ್ನಲ್ಲಿ ಹಲ್ಚಲ್ ಸೃಷ್ಟಿಸುವ ಸಾಧ್ಯತೆ ಇದೆ.
