Ration Supply ಶಿವಮೊಗ್ಗ: ಜಿಲ್ಲೆಯ ಪಡಿತರ ಚೀಟಿದಾರರಿಗೆ ಸರ್ಕಾರವು ಮಹತ್ವದ ಸಿಹಿಸುದ್ದಿ ನೀಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, 2026ರ ಮೇ ಮತ್ತು ಜೂನ್ ಎರಡೂ ತಿಂಗಳ ಪಡಿತರ ಆಹಾರ ಧಾನ್ಯಗಳನ್ನು ಪ್ರಸಕ್ತ ಮೇ ಮಾಹೆಯಲ್ಲೇ ಒಟ್ಟಿಗೆ ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದುಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ವಿಶೇಷ ಯೋಜನೆಯಡಿ, ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್ಗೆ ತಿಂಗಳಿಗೆ 35 ಕೆ.ಜಿ.ಯಂತೆ ಎರಡು ತಿಂಗಳ ಅವಧಿಗೆ ಒಟ್ಟು 70 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತದೆ. ಇದರೊಂದಿಗೆ, ಆದ್ಯತಾ ಪಡಿತರ ಚೀಟಿ (BPL) ಮತ್ತು ರಾಜ್ಯ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ ಎರಡು ತಿಂಗಳ ಅವಧಿಗೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ಹಂಚಿಕೆ ಮಾಡಲಾಗುವುದು. ಈ ಎಲ್ಲಾ ಪಡಿತರವನ್ನು ಮೇ 31 ರೊಳಗಾಗಿ ಮಾತ್ರ ಪಡೆದುಕೊಳ್ಳಲು ಗಡುವು ವಿಧಿಸಲಾಗಿದೆ.
ಪಡಿತರವನ್ನು ಪಡೆದುಕೊಳ್ಳುವಾಗ ಕಾರ್ಡ್ದಾರರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೇ ಮತ್ತು ಜೂನ್ ತಿಂಗಳ ಹಂಚಿಕೆಗಳನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಲು ಪಡಿತರ ಚೀಟಿದಾರರು ಎರಡು ಬಾರಿ ಕಡ್ಡಾಯವಾಗಿ ಬಯೋಮೆಟ್ರಿಕ್ (ಹೆಬ್ಬೆರಳು ಗುರುತು) ನೀಡಬೇಕಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ 6.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಪಡಿತರ ವಿತರಣಾ ಸರ್ವರ್ ಲಭ್ಯವಿರಲಿದ್ದು, ಮೇ 31 ರ ಒಳಗಾಗಿ ತಮ್ಮ ಪಡಿತರವನ್ನು ಸಂಗ್ರಹಿಸಬೇಕಾಗಿ ವಿನಂತಿಸಲಾಗಿದೆ.
ಒಂದೊಮ್ಮೆ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ದೂರುಗಳು ಅಥವಾ ತೊಂದರೆಗಳು ಎದುರಾದಲ್ಲಿ, ಅವರು ಕೇಂದ್ರದ ಉಚಿತ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು. ಅಥವಾ ತಮ್ಮ ಹತ್ತಿರದ ಆಹಾರ ಕಚೇರಿಗೆ ನೇರವಾಗಿ ಭೇಟಿ ನೀಡಿ ದೂರನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತವು ಸ್ಪಷ್ಟಪಡಿಸಿದೆ.
