Chalukya Suri passes away | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಚಾಲುಕ್ಯ ಸೂರಿ ಎಂದೇ ಹೆಸರಾದ ನಗರಸಭೆ ಮಾಜಿ ಅಧ್ಯಕ್ಷ ಎಂ.ಸುರೇಶ್ ಕುಮಾರ್ (65) ಅವರು ನಿನ್ನೆ ದಿನ ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು.ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಕೋಟೆ ಶ್ರೀ ಮಾರಿಕಾಂಬ ದೇವಿ ಸ್ವರ್ಣಮುಖ ಕವಚ ಸಮರ್ಪಣಾ ಸಮಾರಂಭದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಅವರಿಗೆ ಮನೆಗೆ ತೆರಳಿದ ಬಳಿಕ ಹೃದಯಾಘಾತವಾಗಿದೆ. ಸಂಬಂಧಿಗಳು ಕೂಡಲೆ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು.
ಒ.ಟಿ.ರಸ್ತೆಯಲ್ಲಿದ್ದ ಚಾಲುಕ್ಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಾಗಿದ್ದ ಅವರು ಕ್ಲಾರ್ಕ್ಪೇಟೆ ವಾರ್ಡ್ನಿಂದ ಎರಡು ಬಾರಿ ನಗರಸಭೆಯನ್ನು ಪ್ರತಿನಿಧಿಸಿದ್ದರು. ಒಮ್ಮೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಉಪಾಧ್ಯಕ್ಷ ಹಿಂದೂ ಸಂಘಟನಾ ಮಹಾ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸುರೇಶ್ ಕುಮಾರ್ ಅವರ ಹಿರಿ ಮಗಳು ವಿದೇಶದಲ್ಲಿದ್ದಾರೆ. ಮಗಳ ಮನೆಗೆ ಸುರೇಶ್ ಕುಮಾರ್ ಅವರ ಪತ್ನಿ ಸಹ ತೆರಳಿರುವುದರಿಂದ ಮೃತರ ಅಂತ್ಯಕ್ರಿಯೆಯನ್ನು ಅವರು ಬಂದ ಬಳಿಕ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.



