ಶಿವಮೊಗ್ಗ : ಭದ್ರಾವತಿಯ ಯುವಕನಿಗೆ ಓಸಿ ಮಟ್ಕಾ ಜೂಜಾಟ ಕಲಿಸಿ, ನಂತರ ಹಣಕ್ಕಾಗಿ ಒತ್ತಾಯಿಸಿ ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ 50 ವರ್ಷದ ಆರೋಪಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,00,000 ದಂಡ ವಿಧಿಸಿದೆ. ಅಗರದಹಳ್ಳಿ ಕ್ಯಾಂಪ್ನ ನಿವಾಸಿ ಚಂದ್ರಪ್ಪ ಶಿಕ್ಷೆಗೆ ಒಳಗಾದ ವ್ಯಕ್ತಿ.

Bhadravathi ಏನಿದು ಘಟನೆ?
ಈ ಪ್ರಕರಣವು 2019ರ ಏಪ್ರಿಲ್ 28 ರಂದು ನಡೆದಿತ್ತು. ಆರೋಪಿ ಚಂದ್ರಪ್ಪನು 21 ವರ್ಷದ ಶ್ರೀಧರ ಎಂಬ ಯುವಕನಿಗೆ ಅಕ್ರಮ ಓಸಿ ಮಟ್ಕಾ ಜೂಜಾಟವನ್ನು ಪರಿಚಯಿಸಿದ್ದ. ಜೂಜಾಟದಲ್ಲಿ ಭಾಗಿಯಾದ ನಂತರ, ಯುವಕನಿಂದ ಹಣ ನೀಡುವಂತೆ ಪದೇ ಪದೇ ಹಿಂಸೆ ನೀಡಲು ಪ್ರಾರಂಭಿಸಿದ್ದ. ಆರೋಪಿಯ ಈ ಪೀಡನೆಯಿಂದ ಮನನೊಂದ ಶ್ರೀಧರ, ಒತ್ತಡ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ 1860 ರ ಕಲಂ 306 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಗಳಾದ ಪಿ.ಎಸ್.ಐ. ಮೋಹನ್ ಜಿ. ಅವರು ಆರೋಪಿಯ ವಿರುದ್ಧ ಸಮರ್ಪಕ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
4ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ (ಭದ್ರಾವತಿ ಪೀಠ)ದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ಅವರು ಪ್ರಬಲ ವಾದ ಮಂಡಿಸಿದರು. ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪಿ ಚಂದ್ರಪ್ಪನ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ನೀಡಿದೆ.
Bhadravathi 10 Years Jail for Suicide Abettor








