ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / (in Shivamogga) ನಗರದ ವಿದ್ಯಾನಗರದಲ್ಲಿರುವ ಪಿಡಿಒ ದಂಪತಿಯ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ವ್ಯಕ್ತಿಯೊಬ್ಬ, ಸುಮಾರು ಅರ್ಧ ಗಂಟೆಯೊಳಗೆ ₹1,42,29,900 ಮೌಲ್ಯದ 943 ಗ್ರಾಂ ಚಿನ್ನಾಭರಣ ಸೇರಿದಂತೆ ನಗದು ಮತ್ತು ಇತರ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಿಡಿಒ ನಟರಾಜ್ ಕೆ.ಎನ್. ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ನಟರಾಜ್ ಮತ್ತು ಅವರ ಪತ್ನಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಪಿಡಿಒಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆ.28ರಂದು ದಂಪತಿ ಕೆಲಸಕ್ಕೆ ತೆರಳಿದ್ದರು. ಸಂಜೆ ಅವರ ಮಗಳು ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆಗೆ ಮರಳಿದ ದಂಪತಿ ಪರಿಶೀಲಿಸಿದಾಗ, ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ವ್ಯಕ್ತಿ ಬೆಡ್ರೂಮ್ನಲ್ಲಿದ್ದ ಬೀರು ಒಡೆದು ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಬೀರುವಿನಲ್ಲಿದ್ದ 110 ಗ್ರಾಂ ತೂಕದ ಚಿನ್ನದ ಸರ, ಒಟ್ಟು 69 ಗ್ರಾಂ ತೂಕದ 3 ನೆಕ್ಲೆಸ್, 240 ಗ್ರಾಂ ತೂಕದ 6 ಬಳೆ, ಹ್ಯಾಂಗಿಂಗ್ಸ್, ಕಿವಿಯೋಲೆ, 40 ಗ್ರಾಂ ಹಾಗೂ 16 ಗ್ರಾಂ ತೂಕದ ಉಂಗುರ, ಬ್ರೇಸ್ಲೆಟ್, ಚಿನ್ನದ ಗಟ್ಟಿ, ಲಕ್ಷ್ಮೀ ತಾಳಿ ಮತ್ತು ವಿವಿಧ ಮೌಲ್ಯದ ಚಿನ್ನದ ಸರ ಸೇರಿದಂತೆ ಒಟ್ಟು 943 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ₹1,42,29,900 ಎಂದು ಅಂದಾಜಿಸಲಾಗಿದೆ. ಇದರೊಂದಿಗೆ 500 ಗ್ರಾಂ ಬೆಳ್ಳಿಯ ವಸ್ತು, ₹86,000 ನಗದು ಮತ್ತು 15 ಕೈಗಡಿಯಾರಗಳನ್ನೂ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ಚಲನವಲನ
ಕಳ್ಳತನದ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ.28ರ ಮಧ್ಯಾಹ್ನ 1:44ರ ವೇಳೆಗೆ ವ್ಯಕ್ತಿಯೊಬ್ಬ ಮನೆಯ ಆವರಣ ಪ್ರವೇಶಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಮನೆಯ ಸುತ್ತಲೂ ಓಡಾಡಿ, ಕಿಟಕಿಯ ಮೂಲಕ ಒಳಗೆ ಇಣುಕಿ ಪರಿಶೀಲಿಸಿದ್ದಾನೆ. ಬಳಿಕ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿರುವುದು ದೃಶ್ಯದಲ್ಲಿ ದಾಖಲಾಗಿದೆ. ಮಧ್ಯಾಹ್ನ 2:16ರ ವೇಳೆಗೆ ಆತ ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೊರಬಂದಿದ್ದಾನೆ. ನಂತರ ಮನೆಯ ಪಕ್ಕದ ಓಣಿಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು ಅರ್ಧ ಗಂಟೆಯೊಳಗೆ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳತನ ನಡೆಸಿದ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
