ಮಲೆನಾಡು ಟುಡೆ ಸುದ್ದಿ / ಶಿರಾಳಕೊಪ್ಪ / ಪಟ್ಟಣದ (Near Shiralakoppa) ಸಮೀಪದ ಮಳವಳ್ಳಿ ಗ್ರಾಮದ ಮೆಕ್ಕೆಜೋಳದ ಹೊಲದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ಮಳವಳ್ಳಿ ಗ್ರಾಮದ ವಡಕೇಶಪ್ಪ (31) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಮೆಕ್ಕೆಜೋಳದ ಹೊಲಕ್ಕೆ ತೆರಳುವುದಾಗಿ ಕುಟುಂಬದವರಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಅವರು, ರಾತ್ರಿ ಕಳೆದರೂ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಭಾನುವಾರ ಬೆಳಗ್ಗೆಯಿಂದ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಗ್ರಾಮದ ಮೆಕ್ಕೆಜೋಳದ ಹೊಲದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ವಡಕೇಶಪ್ಪ ಅವರ ಕೈಗಳನ್ನು ಕಾಲುಗಳ ಬಳಿ ಕಟ್ಟಿದ ರೀತಿಯಲ್ಲಿ ಮೃತದೇಹ ಕಂಡುಬಂದಿದ್ದು, ಬಾಯಿಯಲ್ಲಿ ವಿಷ ಪದಾರ್ಥ ಇಟ್ಟಿರುವಂತೆ ಮೃತದೇಹದಲ್ಲ ಲಕ್ಷಣಗಳು ಕಾಣುತ್ತಿದ್ದವು ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಸಾವಿನ ಸ್ವರೂಪದ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಕೊಲೆ ನಡೆದಿರಬಹುದು ಎಂಬ ಶಂಕೆಯೂ ಮೂಡಿದೆ.
ಘಟನೆಯ ಮಾಹಿತಿ ತಿಳಿದ ಎಎಸ್ಪಿ ಎ.ಜೆ. ಕಾರ್ಯಪ್ಪ ಮತ್ತು ಪಿಎಸ್ಐ ಪ್ರಶಾಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ವಡಕೇಶಪ್ಪ ಅವರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
