ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ: ದುರ್ಗಿಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 355ನೇ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ರಾಯರಿಗೆ ಚಿನ್ನದ ಮುಖವಾಡ ಹಾಗೂ ಬೃಂದಾವನಕ್ಕೆ ಬೆಳ್ಳಿಯ ದಶಾವತಾರ ಹಾರವನ್ನು ಸಮರ್ಪಿಸಲಾಗುತ್ತಿದೆ.
ಈ ಕುರಿತು ಮಲೆನಾಡುಟುಡೆ’ಗೆ ಮಾಹಿತಿ ನೀಡಿದ ಮಠದ ಕಾರ್ಯದರ್ಶಿ ಸುರೇಶ್, ಇದೇ ಮೊದಲ ಬಾರಿಗೆ ರಾಯರಿಗೆ ಸುಮಾರು 100 ಗ್ರಾಂ ತೂಕದ ಚಿನ್ನದ ಲೇಪನವಿರುವ ಮುಖವಾಡವನ್ನು ಧಾರಣೆ ಮಾಡಿಸಲಾಗುತ್ತಿದೆ. ಇದರಲ್ಲಿ 75 ಗ್ರಾಂನಷ್ಟು ಚಿನ್ನ ಮಠದಲ್ಲೇ ಇತ್ತು ಇನ್ನುಳಿದ ಚಿನ್ನವನ್ನು ಭಕ್ತಾದಿಗಳು ನೀಡಿದ್ದು, ಅದನ್ನು ಬಳಸಿ ಮುಖವಾಡವನ್ನು ಸಿದ್ಧಪಡಿಸಲಾಗಿದೆ. ಹಾಗೆಯೇ ಬೃಂದಾವನಕ್ಕೆ ಸುಮಾರು 2.5 ಕೆಜಿ ತೂಕದ ಬೆಳ್ಳಿಯ ದಶಾವತಾರ ಹಾರವನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ತೊಡಿಸಲಿದ್ದೇವೆ. ಆರಾಧನೆಯ ಮೂರೂ ದಿನಗಳ ಕಾಲ ಭಕ್ತರು ಇದರ ದರ್ಶನ ಪಡೆಯಬಹುದು, ಎಂದು ತಿಳಿಸಿದರು.
ಈ ವಿಶೇಷ ಚಿನ್ನದ ಮುಖವಾಡ ಹಾಗೂ ಬೆಳ್ಳಿಯ ಹಾರವನ್ನು ಒಂದು ತಿಂಗಳ ಹಿಂದೆಯೇ ತಯಾರಿಸಲಾಗಿದ್ದು, ನಾಳೆ ಚಿನ್ನದ ಮುಖವಾಡ ಧರಿಸಿದ ರಾಯರ ದಿವ್ಯ ರೂಪವನ್ನು ಭಕ್ತಾದಿಗಳು ಕಣ್ಣುಂಬಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.
