ಮಲೆನಾಡುಟುಡೆ ನ್ಯೂಸ್/ ಶಿವಮೊಗ್ಗ : ಚಿತ್ರದುರ್ಗದ ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ರೈಲ್ವೆ ಸೇತುವೆಯಿಂದ ತುಂಗಾ ಹೊಳೆಗೆ ಹಾರಿದ ಘಟನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಕಾಣೆಯಾಗಿದ್ದು, ಅವರ ಶೋಧ ಕಾರ್ಯ ಇಂದು ಸಹ ಮುಂದುವರಿದಿದೆ. ಹೊಳೆಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಘಟನೆಯ ಹಿನ್ನೆಲೆ
ನಿನ್ನೆ ಅಂದರೆ ಸೋಮವಾರ ಸಂಜೆ ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆಯೊಬ್ಬರು 11 ತಿಂಗಳ ಗಂಡು ಮಗು ಸೇರಿದಂತೆ ಇಬ್ಬರು ಹೆಣ್ಣುಮಕ್ಕಳೊಂದಿಗೆ ರೈಲ್ವೆ ಸೇತುವೆ ಮೇಲಿನಿಂದ ಹೊಳೆಗೆ ಹಾರಿದ್ದರು. ಇದನ್ನು ಗಮನಿಸಿದ ಸ್ಥಳೀಯರಾದ ದಾದಾಪೀರ್ ಹಾಗೂ ನವೀನ್ ಎಂಬುವರು ತಕ್ಷಣ ಹೊಳೆಗೆ ಹಾರಿ ಮಹಿಳೆ ಹಾಗೂ 11 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದರು. ಆದರೆ ಸಾನ್ವಿಕಾ (6) ಮತ್ತು ತನ್ವಿಕಾ (4) ಎಂಬ ಇಬ್ಬರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದರು. ನಂತರ ಅವರಿಗಾಗಿ ರಾತ್ರಿಯವರೆಗೂ ಶೋಧ ಕಾರ್ಯ ನಡೆದಿತ್ತಾದರೂ, ಕತ್ತಲೆಯಾದ ಕಾರಣ ಕಾರ್ಯಾಚರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.
ಇದುವರೆಗು ಏನೆಲ್ಲಾ ನಡೀತು ?
ಕಾಣೆಯಾದ ಇಬ್ಬರು ಹೆಣ್ಣುಮಕ್ಕಳ ಪತ್ತೆಗಾಗಿ ಇಂದು ಬೆಳಿಗ್ಗೆಯಿಂದಲೇ ಅಗ್ನಿಶಾಮಕ ಠಾಣಾಧಿಕಾರಿ ಹುಸೇನ್, ಸಿಬ್ಬಂದಿಗಳಾದ ಸುನಿಲ್, ಗಣೇಶ್, ಮಾರುತಿ, ಸಂತೋಷ್, ನಿಹಾರ್ ಹಾಗೂ ಸತೀಶ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ನದಿಯ ಪ್ರತಿಯೊಂದು ಮೂಲೆ ಮೂಲೆಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ, ಆದರೆ ಇದುವರೆಗೂ ಮಕ್ಕಳ ಯಾವುದೇ ಕುರುಹು ಸಿಕ್ಕಿಲ್ಲ. ಇದರ ನಡುವೆ ಸ್ಥಳದಲ್ಲಿದ್ದ ತಾಯಿ ಭವಾನಿ ನನ್ನ ಮಕ್ಕಳು ಬೇಕು ಎಂದು ಗೋಳಿಡುತ್ತಿರುವ ದೃಶ್ಯಕ್ಕೆ ನೆರೆದಿದ್ದ ಸ್ಥಳಿಯರು ಮರುಗಿದರು, ಹಾಗೆಯೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಧಾನ ಪಡಿಸಿದ ದೃಶ್ಯ ಕಂಡುಬಂತು.. ಈ ವಿಚಾರಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ತಿಳಿದುಬರಲಿದೆ.
