ಶಿವಮೊಗ್ಗದಲ್ಲಿ ನಕಲಿ ಚಿನ್ನದ ನಾಣ್ಯಗಳ ಹೆಸರಿನಲ್ಲಿ 11 ಲಕ್ಷ ರೂ. ವಂಚನೆ
Shivamogga news today / ಬೆಂಗಳೂರಿನ ನಿವಾಸಿ ಗೌತಮ್ ಭಂಡಾರಿ ಎಸ್ ಅವರಿಗೆ ಶಿವಮೊಗ್ಗದಲ್ಲಿ ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ಬರೋಬ್ಬರಿ 11 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿನ ಟ್ಯಾಕ್ಸಿಯೊಂದರಲ್ಲಿ ಪರಿಚಯವಾದ ಶಿವಮೊಗ್ಗದ ಪ್ರದೀಪ್ ಎಂಬಾತ ಗೌತಮ್ರನ್ನು ಶಿವಮೊಗ್ಗಕ್ಕೆ ಬಂದರೆ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿದ್ದನು. ಗೌತಮ್ ತಮ್ಮ ಸ್ನೇಹಿತರಾದ ನಾಗೇಶ್ ಮತ್ತು ಚಿಕ್ಕ ಸ್ವಾಮಿ ಅವರೊಂದಿಗೆ ಶಿವಮೊಗ್ಗಕ್ಕೆ ಬಂದು ಸಿಗಂದೂರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಪ್ರದೀಪ್ರನ್ನು ಸಂಪರ್ಕಿಸಿದ್ದಾರೆ. ಶ್ರೀರಾಮಪುರದಲ್ಲಿ ಗೌತಮ್ರನ್ನು ಭೇಟಿಯಾದ ಪ್ರದೀಪ್, ತನ್ನ ಜೊತೆಗಿದ್ದ ವಸಂತ್, ಕೊಳ್ಳಿ ರಘು ಮತ್ತು ಮುದ್ದಪ್ಪರನ್ನು ಪರಿಚಯಿಸಿ, ಮುದ್ದಪ್ಪನ ಸಹೋದರಿಯ ಮದುವೆಗೆ ಹಣದ ಅವಶ್ಯಕತೆ ಇದೆ ಎಂದು ಸುಳ್ಳು ಹೇಳಿದ್ದಾರೆ. ತಮ್ಮ ಬಳಿ ಹಳೆಯ ಕಾಲದ 250 ಗ್ರಾಂ ಬಂಗಾರದ ನಾಣ್ಯಗಳಿವೆ ಎಂದು ಹೇಳಿ, ಅವುಗಳನ್ನು 11 ಲಕ್ಷ ರೂ.ಗೆ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಗೌತಮ್ರಿಗೆ ನಂಬಿಕೆ ಮೂಡಿಸಲು ಮೊದಲು ಎರಡು ಅಸಲಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಲು ನೀಡಿದ್ದು, ಬೆಂಗಳೂರಿನಲ್ಲಿ ಪರಿಶೀಲಿಸಿದಾಗ ಅವು ಅಸಲಿ ಎಂದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಗೌತಮ್ ಸ್ನೇಹಿತರಿಂದ ಹಣ ಪಡೆದು ಪ್ರದೀಪ್ಗೆ ನೀಡಿ 250 ಗ್ರಾಂ ನಕಲಿ ಬಂಗಾರದ ನಾಣ್ಯಗಳನ್ನು ಪಡೆದುಕೊಂಡಿದ್ದಾರೆ. ನಂತರ ಇವು ನಕಲಿ ಎಂದು ತಿಳಿದುಬಂದಿದ್ದು, ಗೌತಮ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಯುವ ವಕೀಲರ ಮೇಲೆ ರಾಡ್ನಿಂದ ಮಾರಣಾಂತಿಕ ಹಲ್ಲೆ /Shivamogga news today
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಾಡಹಗಲೇ ಯುವ ವಕೀಲ ಹಾಗೂ ಬಿಜೆಪಿ ಮುಖಂಡ ಮಧುಕರ್ ಮಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪಟ್ಟಣದ ಸಿಬಿನಕೆರೆ ಬಳಿ ಈ ಘಟನೆ ನಡೆದಿದ್ದು, ಮಯ್ಯ ಅವರನ್ನು ಕೋರ್ಟ್ ಬಳಿಯಿಂದಲೇ ಬೆನ್ನಟ್ಟಿ ನಾಲ್ವರು ರಾಡ್ಗಳಿಂದ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಿಂದ ಮಧುಕರ್ ಮಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರಾಜಕೀಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ಮಠದಲ್ಲಿ 16ನೇ ಶತಮಾನದ ಅಪರೂಪದ ತಿಗಳಾರಿ ಲಿಪಿ ಶಾಸನ ಪತ್ತೆ: Shivamogga news today
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪದ ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರ ಗಮನ ಸೆಳೆದಿದೆ. ಮಠದ ತುಳಸಿಕಟ್ಟೆಯಲ್ಲಿ ಕಂಡುಬಂದ ಈ ಶಾಸನವು ಏಳು ಸಾಲುಗಳಿದ್ದು, ವಿಶಿಷ್ಟವಾದ ತಿಗಳಾರಿ ಲಿಪಿಯಲ್ಲಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪತ್ತೆಯಾದ ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನ ಇದಾಗಿದ್ದು, ಇದು ಸುಮಾರು ಹದಿನಾರನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ “ವಸುದೇವ ತೀರ್ಥರಿಂದಲೂ ವೃಂದಾವನ ಸೇವೆ ಅರ್ಪಿತ” ಎಂದು ಉಲ್ಲೇಖಿಸಲಾಗಿದ್ದು, ಮಠದ ಯತಿಗಳಾದ ಶ್ರೀ ವಸುದೇವ ತೀರ್ಥರು ಹಿಂದಿನ ಯತಿಗಳ ಬೃಂದಾವನಗಳನ್ನು ನಿರ್ಮಿಸಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಇದೇ ತುಳಸಿ ವೃಂದಾವನದ ಇನ್ನೊಂದು ಭಾಗದಲ್ಲಿ ಹತ್ತು ಸಾಲುಗಳ ಕೆಳದಿ ಲಿಪಿಯ ಶಾಸನವೂ ಪತ್ತೆಯಾಗಿದ್ದು, ಇದು ನಳ ಸಂವತ್ಸರದಲ್ಲಿ ರಾಮಚಂದ್ರನು ದೇವರ ಚರಣಗಳಿಗೆ ತೋಟ, ಕೆರೆ ಕಟ್ಟೆಗಳನ್ನು ದಾನವಾಗಿ ನೀಡಿದ್ದಾನೆ ಎಂದು ತಿಳಿಸುತ್ತದೆ.
ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್ ಹೂಡಿಕೆ ಹೆಸರಿನಲ್ಲಿ 17.74 ಲಕ್ಷ ರೂ. ಆನ್ಲೈನ್ ವಂಚನೆ:Shivamogga news today
ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಅಧಿಕ ಲಾಭಾಂಶ ಗಳಿಸಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17.74 ಲಕ್ಷ ರೂ. ಆನ್ಲೈನ್ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಟೆಲಿಗ್ರಾಂನಲ್ಲಿ “ನ್ಯೂ ಎಗ್ ಕಮ್ಯೂನಿಟಿ” ಎಂಬ ಗ್ರೂಪ್ಗೆ ಸೇರಿದ್ದ ಶಿವಮೊಗ್ಗದ ವ್ಯಕ್ತಿಗೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದೆಂದು ವಂಚಕರು ಆಮಿಷವೊಡ್ಡಿದ್ದಾರೆ. ವಂಚಕರು ಯು.ಪಿ.ಐ. ಐಡಿಗಳನ್ನು ನೀಡಿ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದು, ಅಧಿಕ ಲಾಭಾಂಶದ ಆಸೆಗಾಗಿ ಆ ವ್ಯಕ್ತಿ ಮೇ 5 ರಿಂದ ಮೇ 29 ರವರೆಗೆ ಒಟ್ಟು 17.74 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ, ಮತ್ತಷ್ಟು ಹಣ ಕಳುಹಿಸುವಂತೆ ವಂಚಕರು ಒತ್ತಾಯಿಸಿದಾಗ, ತಾನು ವಂಚನೆಗೊಳಗಾಗಿರುವುದು ಆ ವ್ಯಕ್ತಿಗೆ ಅರಿವಾಗಿದೆ. ಈ ಸಂಬಂಧ ಹಣ ಕಳೆದುಕೊಂಡಿರುವ ಶಿವಮೊಗ್ಗದ ವ್ಯಕ್ತಿ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Shivamogga news today