Shivamogga ಶಿವಮೊಗ್ಗ: ಜಿಲ್ಲಾ ಕೇಂದ್ರದ ಹೊರವಲಯದ ಹರಿಗೆಯಲ್ಲಿ ಲೈನ್ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ್ (29) ಎಂಬ ಪವರ್ಮ್ಯಾ ನ್ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಹರಪನಹಳ್ಳಿ ತಾಲೂಕಿನವರಾದ ಇವರು ಶಿವಮೊಗ್ಗದ ಎಂಆರ್ಎಸ್ (MRS) ವಸತಿ ಗೃಹದಲ್ಲಿ ವಾಸವಾಗಿದ್ದರು.
ಭಾನುವಾರ ಸಂಜೆ ಹರಿಗೆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಸಾರ್ವಜನಿಕರಿಂದ ಮೆಸ್ಕಾಂ ಕಚೇರಿಗೆ ದೂರುಗಳು ಬಂದಿದ್ದವು. ದೂರು ಬರುತ್ತಿದ್ದಂತೆ ಪವರ್ಮ್ಯಾನ್ ನಾಗರಾಜ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ್ದರು. ಆ ಸಮಯದಲ್ಲಿ ಲೈನ್ಗೆ ವಿದ್ಯುತ್ ಸಂಪರ್ಕ ಪೂರೈಕೆ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ತಂತಿಗಳಿಗೆ ಅಡ್ಡಲಾಗಿ ಬೆಳೆದಿದ್ದ ಮರದ ಕೊಂಬೆಗಳನ್ನು ಕತ್ತರಿಸುವ (ಜಂಗಲ್ ಕಟಿಂಗ್) ಕೆಲಸಕ್ಕೆ ಮುಂದಾಗಿದ್ದಾರೆ.
ಆದರೆ, ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ದುರಾದೃಷ್ಟವಶಾತ್ ಹಠಾತ್ತಾಗಿ ವಿದ್ಯುತ್ ಸ್ಪರ್ಶಿಸಿದೆ. ತೀವ್ರವಾಗಿ ವಿದ್ಯುತ್ ಆಘಾತಕ್ಕೊಳಗಾದ ನಾಗರಾಜ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಮೆಸ್ಕಾಂ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
