ಹೊಳೆಹೊನ್ನೂರು: ತುಂಗಾ ಮತ್ತು ಭದ್ರಾ ನದಿಗಳ ಪವಿತ್ರ ಸಂಗಮ ಸ್ಥಾನವಾದ ಕೂಡ್ಲಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಯುಗಾದಿ ಅಮಾವಾಸ್ಯೆಯಂದು ಸಡಗರದಿಂದ ಆರಂಭವಾಗಿದೆ. ಒಂದು ವಾರದ ಕಾಲ ನಡೆಯುವ ಈ ಹೊಳೆ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ಪಕ್ಕದ ಕೇರಳ ಮತ್ತು ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಗ್ರಾಮ ದೇವರುಗಳನ್ನು ಸಂಗಮೇಶ್ವರನ ಸನ್ನಿಧಾನಕ್ಕೆ ಕರೆತಂದ ಭಕ್ತರು, ನದಿಯಲ್ಲಿ ಪುಣ್ಯಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಸಂಗಮೇಶ್ವರನಿಗೆ ಹಣ್ಣು-ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದಿದ್ದರಿಂದ ಭಕ್ತರು ನದಿಯಲ್ಲಿ ನಡೆದುಕೊಂಡು ಬಂದು ಜಾತ್ರೆ ಸೇರಿದರು.
ಜಾತ್ರೆಯ ಹಿನ್ನೆಲೆಯಲ್ಲಿ ಸಂಗಮ ಸ್ಥಳದಿಂದ ಜಾತ್ರೆ ನಡೆಯುವ ಜಾಗಕ್ಕೆ ಹೋಗಿ ಬರಲು ಭಕ್ತರು ತೆಪ್ಪಗಳನ್ನು ಅವಲಂಬಿಸಿದ್ದಾರೆ. ಬಿಸಿಲ ಜಳ ಹೆಚ್ಚಿದ್ದರಿಂದ ಭಕ್ತರು ನದಿ ನೀರಿನಲ್ಲಿ ಮಿಂದು ನಿರಾಳರಾದರು. ಇನ್ನು ಜನಜಂಗುಳಿಯ ಲಾಭ ಪಡೆಯುವ ಜೇಬುಗಳ್ಳರ ಬಗ್ಗೆ ಮತ್ತು ನದಿಗೆ ಇಳಿಯುವ ಮಕ್ಕಳ ಸುರಕ್ಷತೆಯ ಬಗ್ಗೆ ಪೊಲೀಸರು ಧ್ವನಿವರ್ಧಕದ ಮೂಲಕ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ.
Koodli Sangameshwara Jatre Holy Dip Tunga Bhadra


