Ganesha chaturthi ಗಣಪತಿ ಹಬ್ಬವೆಂದರೆ ಎಲ್ಲರಲ್ಲೂ ಸಡಗರ ಮತ್ತು ಸಂಭ್ರಮ. ಹಬ್ಬಕ್ಕೆ ಒಂದು ತಿಂಗಳು ಮುಂಚೆಯೇ ಸಂಘದ ಸದಸ್ಯರು ಒಟ್ಟಾಗಿ ಸಭೆ ಸೇರಿ, ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆ ಹಲವು ವಿಭಿನ್ನ ರೀತಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ, ಸಾಗರದ ಸುಳುಗೋಡು-ಯಡೂರು ವಿನಾಯಕ ಸೇವಾ ಸಮಿತಿಯ ಗಣೇಶ ಪ್ರತಿಷ್ಠಾಪನೆಯು ಹೆಚ್ಚು ಗಮನ ಸೆಳೆದಿದೆ.
ಹೌದು, ಈ ಬಾರಿ ಸಾಗರದ ಸುಳುಗೋಡು-ಯಡೂರು ವಿನಾಯಕ ಸೇವಾ ಸಮಿತಿಯು ಐತಿಹಾಸಿಕ ಸಿಗಂದೂರು ಸೇತುವೆಯ ಮಾದರಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದೆ. ಕಳೆದ ವರ್ಷ ಮಾಣಿ ಡ್ಯಾಂ ಮಾದರಿಯನ್ನು ನಿರ್ಮಿಸಿದ್ದ ಈ ಸಮಿತಿಯು, ಯಡೂರಿನ ಅಭೀಶ್ ಹಾಗೂ ಪ್ರಜ್ವಲ್ ಮಾಲೀಕತ್ವದ ‘Zoom Backgrounds’ ಸಂಸ್ಥೆಯ ಕೈಚಳಕದಲ್ಲಿ ಮೂಡಿಬಂದ ಸಿಗಂದೂರು ಸೇತುವೆ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಗಳಿಸಿದೆ.

ಇಲ್ಲಿ ಸಿಗಂದೂರು ಸೇತುವೆಯನ್ನು ನಿರ್ಮಿಸಿ, ಅದರ ದಂಡೆಯಲ್ಲಿ ಗಣೇಶನನ್ನು ಕೂರಿಸಲಾಗಿದೆ. ಸೇತುವೆಯ ಮೇಲೆ ಕಾರು ಮತ್ತು ಲಾರಿಗಳು ಸಂಚರಿಸುತ್ತಿರುವಂತೆ ಆಟಿಕೆಗಳನ್ನು ಇರಿಸಲಾಗಿದೆ. ಹಾಗೆಯೇ ಸೇತುವೆಯ ಕೆಳಗೆ ನೀರನ್ನು ತುಂಬಿಸಿ, ಮೀನುಗಳನ್ನು ಬಿಡಲಾಗಿದೆ. ಜೊತೆಗೆ, ಅದರಲ್ಲಿ ಲಾಂಚ್ ಚಲಿಸುತ್ತಿರುವಂತೆ ನೈಜವಾಗಿ ತೋರಿಸಲಾಗಿದೆ.

ಪ್ರತಿ ವರ್ಷ ಗಣೇಶ ಹಬ್ಬದಲ್ಲಿ ಚಾಲ್ತಿಯಲ್ಲಿರುವ ವಿಷಯವನ್ನು ಆಯ್ಕೆ ಮಾಡಿಕೊಂಡು ಗಣಪತಿಯನ್ನು ತಯಾರಿಸಲಾಗುತ್ತದೆ. ಅದರ ಜೊತೆಗೆ, ಬೆಳಕಿನ ವಿನ್ಯಾಸ (lighting) ಮತ್ತು ಇತರ ಅಲಂಕಾರಗಳನ್ನು ಸಹ ಟ್ರೆಂಡಿಂಗ್ಗೆ ತಕ್ಕಂತೆ ಮಾಡಲಾಗುತ್ತದೆ. ಈ ಸಮಿತಿಯು ಐತಿಹಾಸಿಕ ಸಿಗಂದೂರು ಸೇತುವೆಯನ್ನು ವಿನ್ಯಾಸಕ್ಕಾಗಿ ಆರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.

