ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹಧಾಮ ಸಫಾರಿಗೆ ಹೊಸ ಅತಿಥಿಗಳ ಆಗಮನವಾಗಿದೆ. ಸಿಂಹಧಾಮದಿಂದ ಪ್ರಾಣಿಗಳ ವಿನಿಮಯ ಯೋಜನೆಯ ಅಡಿಯಲ್ಲಿ ಪಾಟ್ನಾದಿಂದ ಹೊಸದಾಗಿ 08 ತೋಳಗಳನ್ನು ಕರೆತರಲಾಗಿದೆ ಎಂದು ಸಿಂಹಧಾಮದ ಇ.ಡಿ. ಅಮರಾಕ್ಷರ್ ಅಮರಾಕ್ಷರ್ ಮಲೆನಾಡು ಟುಡೆಗೆ ತಿಳಿಸಿದ್ದಾರೆ.
ನಮ್ಮ ಪ್ರತಿನಿದಿ ಜೆಪಿಯವರಿಯೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡ ಅವರು, ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಪ್ರಾಣಿಗಳ ವಿನಿಮಯ ಯೋಜನೆಯ ಅಡಿಯಲ್ಲಿ ಕಳೆದ ವಾರ ಎರಡು ಗಂಡು ಕಾಟಿಗಳನ್ನು (ಕಾಡುಕೋಣ) ಬಿಹಾರದ ಪಾಟ್ನಾ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಇದೀಗ 3 ಗಂಡು ಮತ್ತು 5 ಹೆಣ್ಣು ಸೇರಿದಂತೆ 8 ತೋಳಗಳನ್ನು ಪಾಟ್ನಾದ ಮೃಗಾಲಯದಿಂದ ಕರೆತರಲಾಗಿದೆ ಎಂದರು.
ಈಗಾಗಲೇ ತೋಳಗಳನ್ನು ಕರೆತಂದು ಒಂದು ವಾರ ಕಳೆದಿದ್ದು, ಅವುಗಳನ್ನು ಕೊಠಡಿಯಲ್ಲಿ ಇಟ್ಟಿದ್ದೇವೆ. ಹೊಸದಾದ ಜಾಗಕ್ಕೆ ತೋಳಗಳು ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದೇವೆ. ಸದ್ಯಕ್ಕೆ ತೋಳಗಳಿರುವ ಪ್ರದೇಶಕ್ಕೆ ಹೋಗಲು ಅನಿಮಲ್ ಕೀಪರ್ಗೆಮಾತ್ರ ಅವಕಾಶವಿದ್ದು, ಮುಂದಿನ ಸೋಮವಾರದಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿವೆ ಎಂದರು.
