Wall collapse accident : ಶಿವಮೊಗ್ಗ: ಜಿಲ್ಲೆಯ ತಾಲೂಕಿನ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಚಾಯ ಕಟ್ಟಡದ ಗೋಡೆ ಕುಸಿದು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಆತನ ಸಹೋದರನ ಕೈಕಾಲುಗಳು ಮುರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಿದ್ಲೀಪುರದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಸಮುಚ್ಚಾಯ ಭವನದ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿತ್ತು ಮತ್ತು ಅದು ಉದ್ಘಾಟನೆಯನ್ನೂ ಸಹ ಕಂಡಿತ್ತು. ಕಟ್ಟಡದ ಉದ್ಘಾಟನೆಯಾಗಿದ್ದರೂ, ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದ್ದ ತಾತ್ಕಾಲಿಕ ಕಟ್ಟಡ ಕೆಡವಲು ಸಿದ್ಲೀಪುರ ಗ್ರಾಮದ ನಿವಾಸಿಗಳಾದ ಮಂಜು (35) ಮತ್ತು ಆತನ ಸಹೋದರ ಮುತ್ತು ಮುಂದಾಗಿದ್ದರು.
ಈ ವೇಳೆ, ಸಮುಚ್ಚಾಯ ಕಟ್ಟಡದ ಒಂದು ಭಾಗದ ಗೋಡೆ ದಿಢೀರನೆ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಮಂಜು ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸಹೋದರ ಮುತ್ತು ಅವರಿಗೆ ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿರುವ ಮುತ್ತುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Wall collapse accident


