Belur Gopalakrishna ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ಹೊಡೆಯುವ ಉದ್ದೇಶದಿಂದ ರೂಪಿಸಲಾಗಿತ್ತು. ಈಗ ಅದೇ ಪಕ್ಷದವರು ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಧೈರ್ಯವಿದ್ದರೆ ಈ ಯೋಜನೆಯನ್ನು ನಿಲ್ಲಿಸಲಿ ನೋಡೋಣ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಇಂದು ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪ್ರತಿಭಟನೆ ನಡೆಸಲು ಸ್ವಾಮೀಜಿಗಳು ಮತ್ತು ಜನಸಾಮಾನ್ಯರು ಸೇರಿದಂತೆ ಎಲ್ಲರಿಗೂ ಅವಕಾಶವಿದೆ. ಆದರೆ, ಈ ಯೋಜನೆಯಿಂದಾಗುವ ಪರಿಣಾಮಗಳ ಕುರಿತು ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ ಈ ಯೋಜನೆ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಬಿಜೆಪಿಯವರಿಗೆ ದುಡ್ಡು ಹೊಡೆಯುವ ಕಲೆ ಚೆನ್ನಾಗಿ ತಿಳಿದಿದೆ. ಹಾಗಾಗಿ, ಈ ಯೋಜನೆಯು ಹಿಂದೆ ಅವರ ಹಣ ಹೊಡೆಯುವ ಯೋಜನೆಯಾಗಿತ್ತು, ಈಗ ಅದರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದರು.
ಈ ಯೋಜನೆ ನಿಲ್ಲಿಸುವುದಿದ್ದರೆ ನಿಲ್ಲಿಸಿ ನೋಡೋಣ. ನಿಲ್ಲಿಸಲು ಇವರೇನು ಇಂಜಿನಿಯರ್ಗಳಾ? ಎಂದು ಪ್ರಶ್ನಿಸಿದ ಅವರು, 1,465 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಯಿಂದ ಸ್ವಲ್ಪ ಮಟ್ಟಿನ ಅರಣ್ಯ ಮತ್ತು ಪರಿಸರ ಹಾನಿ ಆಗುವುದು ಸಹಜ. ಆದರೆ, ಬಿಜೆಪಿ ನಾಯಕರು ರೈತ ಸಂಘದ ಜೊತೆ ಸೇರಿ ಹೋರಾಟ ಮಾಡುವುದು ಎಷ್ಟು ಸರಿ? ಬಿಜೆಪಿಯವರು ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಬಾರದು ಎಂದು ಅವರು ಹೇಳಿದರು.
Belur Gopalakrishna ಯತೀಂದ್ರ ಹೇಳಿಕೆ ವೈಯಕ್ತಿಕ: ವರಿಷ್ಠರ ನಿರ್ಧಾರವೇ ಅಂತಿಮ
Belur Gopalakrishna ಸಿದ್ದರಾಮಯ್ಯನವರು ರಾಜಕೀಯದ ಅಂತಿಮ ಘಟ್ಟದಲ್ಲಿದ್ದಾರೆ ಎಂದು ಯತೀಂದ್ರ ಸಿದ್ಧರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣ, ಯತೀಂದ್ರ ಸಿದ್ದರಾಮಯ್ಯನವರು ಯಾಕೆ ಆ ಹೇಳಿಕೆ ನೀಡಿದರು ಎಂಬುದು ನನಗೆ ತಿಳಿದಿಲ್ಲ. ಆದರೆ, ನಮ್ಮ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವುದು ನಮ್ಮ ರಾಷ್ಟ್ರೀಯ ನಾಯಕರು. ನಮ್ಮ ಹೈಕಮಾಂಡ್ನ ಆದೇಶದಂತೆ ನಾವು ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ನನಗೂ ಸಚಿವನಾಗಬೇಕೆಂಬ ಆಸೆ ಇದೆ, ಕೊಟ್ಟುಬಿಡ್ತಾರಾ? ನಾನು ಸಿಎಂ ಆಗಬೇಕು ಅಂತೀನಿ, ಮಾಡಿಬಿಡ್ತಾರಾ? ಎಂದು ಪ್ರಶ್ನಿಸಿದ ಅವರು, ಯಾರ್ಯಾರೋ ನೀಡುವ ಇಂತಹ ಹೇಳಿಕೆಗಳು ಕೇವಲ ಅವರವರ ವೈಯಕ್ತಿಕ ಅಭಿಪ್ರಾಯಗಳಾಗಿರುತ್ತವೆ. ಆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮಲ್ಲಿ ಎಲ್ಲದಕ್ಕೂ ಕೇಂದ್ರ ವರಿಷ್ಠರೇ ಸೂಚನೆ ನೀಡಬೇಕು. ಅವರ ನಿರ್ಧಾರವೇ ಅಂತಿಮವಾಗಿದ್ದು, ನಾವೆಲ್ಲರೂ ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಾನು ಯಾರ ಪರವಾಗಿಯೂ ಇಲ್ಲ, ನಾನು ಕಾಂಗ್ರೆಸ್ ಪಕ್ಷದ ಪರವಾಗಿದ್ದೇನೆ ಎಂದು ತಿಳಿಸಿದರು.
Belur Gopalakrishna ಸತೀಶ್ ಜಾರಕಿಹೊಳಿಯವರು ಈ ಹಿಂದಿನ ಚುನಾವಣೆಯಲ್ಲೇ 2028ರ ಚುನಾವಣೆ ತಮ್ಮ ಸಾರಥ್ಯದಲ್ಲಿ ನಡೆಯಬೇಕು ಎಂದು ಹೇಳಿದ್ದರು. ಆದರೆ, ಕೇಂದ್ರದ ನಾಯಕರು ಹೇಳಿದಂತೆ ಅಂತಿಮ ನಿರ್ಧಾರವಾಗುತ್ತದೆ. ಯಾರ್ಯಾರೋ ಹೇಳಿದ್ದಕ್ಕೆ ನಮ್ಮ ಪಕ್ಷದಲ್ಲಿ ಬೆಲೆ ಇಲ್ಲ. ಅನೇಕ ಶಾಸಕರು ಅನೇಕ ಹೇಳಿಕೆಗಳನ್ನು ನೀಡಿದ್ದರೂ ಸಹ, ಅದೆಲ್ಲವೂ ಅವರ ವೈಯಕ್ತಿಕ ಹೇಳಿಕೆಗಳು. ಪಕ್ಷದ ನಾಯಕರ ನಿರ್ಧಾರಕ್ಕೆ ಮಾತ್ರ ನಾವು ಜೈ ಎನ್ನುತ್ತೇವೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು. ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನೀಡಿದ್ದಾರೆ. ಆದರೆ ಅವರ ಮಗನೇ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಮಗ ಹೇಳಿದ್ದಕ್ಕೆ ನಡೆಯೋದಿಲ್ಲ, ನಮ್ಮ ವರಿಷ್ಠರ ತೀರ್ಮಾನವೇ ನಡೆಯುತ್ತದೆ ಎಂದರು.


