SHIVAMOGGA | MALENADUTODAY NEWS | ಮಲೆನಾಡು ಟುಡೆ Jan 20, 2025
ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ಕರಂಬಾಳ್ ಅರಣ್ಯದಲ್ಲಿ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಹಾಗೂ ಮಾವುತ ಕಾವಾಡಿಗಳ ತಂಡ ಕಾರ್ಯಾಚರಣೆ ನಡೆಸಿದ್ದ ಕಾಡಾನೆ ವಿಚಾರ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಖಾನಾಪುರದಿಂದ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿರುವ ಕ್ಯಾಂಪ್ಗೆ ಶಿಫ್ಟ್ ಮಾಡಿರುವ ಆನೆಯನ್ನು ಇದೀಗ ಮತ್ತೆ ಕಾಡಿಗೆ ಬಿಡಲಾಗುತ್ತಿದೆ. ಬಹುಶಃ ಇನ್ನೇರಡು ದಿನಗಳಲ್ಲಿ ಕಾಡಾನೆಯನ್ನು ಕಾಡಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾಹಿತಿ ಲಭ್ಯವಾಗಿದೆ.
ಖಾನಾಪುರದ ಕರಂಬಳ, ಚಾಪಗಾಂವ ಹಾಗೂ ಸುತ್ತಮುತ್ತಲಿನ ರೈತರಿಗೆ ತೊಂದರೆ ಕೊಡುತ್ತಿದ್ದ ಕಾಡಾನೆಯನ್ನು ಹಿಡಿಯುವ ಸಲುವಾಗಿ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಿಂದ ಬಾಲಣ್ಣ, ಸೋಮಣ್ಣ, ಬಹದ್ದೂರ್, ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದವು. ಪಶುವೈದ್ಯ ಡಾ|| ರಮೇಶ್ ಹಾಗೂ ಸಕ್ರೆಬೈಲ್ನ ಮಾವುತರು ಹಾಗೂ ಕಾವಾಡಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಂದಾಜು 12 ಲಕ್ಷ ರೂಪಾಯಿ ಮೊತ್ತದ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಹಿಡಿದಿದ್ದ ಸಕ್ರೆಬೈಲ್ ಆನೆ ಬಿಡಾರದ ಟೀಂ, ಅಲ್ಲಿಂದ ಕಾಡಾನೆಯನ್ನು ಸಕ್ರೆಬೈಲ್ ಆನೆ ಕ್ಯಾಂಪ್ಗೆ ಶಿಫ್ಟ್ ಮಾಡಿತ್ತು.
ಜನವರಿ 9 ರಂದು ಕಾಡಾನೆಯನ್ನು ಹಿಡಿಯಲಾಗಿತ್ತು, ಜನವರಿ 10 ಕ್ಕೆ ಕಾಡಾನೆ ಸಕ್ರೆಬೈಲ್ ಕ್ಯಾಂಪ್ನಲ್ಲಿತ್ತು. ಈ ಮೊದಲು ಅದನ್ನು ಫಳಗಿಸುವ ಇರಾದೆಯು ಇತ್ತು. ಆದರೆ ಅದೇನು ಅಡ್ಡ ಬಂತೋ ಗೊತ್ತಿಲ್ಲ. ಅರಣ್ಯ ಇಲಾಖೆ ಇದೀಗ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲು ನಿರ್ದರಿಸಿ , ಕಾಡಾನೆಯನ್ನು ಶಿಫ್ಟ್ ಮಾಡಲು ಮುಂದಾಗಿದೆ. ಶಿವಮೊಗ್ಗ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಯಾವುದೇ ಮಾಹಿತಿಗಳನ್ನು ಹೊರಜಗತ್ತಿಗೆ ನೀಡುತ್ತಿಲ್ಲ. ಈ ಹಿಂದೆ ಆನೆ ಬಾಲ ಕಟ್ ಮಾಡಿದ ಪ್ರಸಂಗದ ಬಳಿಕ, ಆನೆಗಳ ವಿಚಾರದಲ್ಲಿ ಹಲವು ಸಂಗತಿಗಳು ಮುಗುಮ್ಮಾಗಿ ನಡೆದಿವೆ. ಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ ಕಾಡಾನೆಗಳ ವಿಚಾರವೂ ಸೇರಿದಂತೆ ಹಲವು ಚರ್ಚೆಗಳು ಈಗಾಗಲೇ ವನ್ಯಜೀವಿ ತಜ್ಞ ವಲಯದಲ್ಲಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಬೇರೆಯದ್ದೆ ಸ್ವರೂಪ ಪಡೆದುಕೊಳ್ಳಬಹುದು.

ಸದ್ಯ ಕಾಡಾನೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಕ್ರೆಬೈಲ್ ಆನೆ ಬಿಡಾರದಲ್ಲಿದ್ದ ಖಾನಾಪುರದ ಆನೆಯನ್ನು ಮತ್ತದೆ ಖಾನಾಪುರದ ಕಾಡಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಆದರೆ ಇದೆ ನಿಕ್ಕಿಯಲ್ಲ, ಬೇರೆಡೆಗೂ ಕಾಡಾನೆಯು ಸ್ಥಳಾಂತಗೊಳ್ಳಬಹುದು. ಕಾಡಾನೆಯು ಮೈಲ್ಡ್ ಆಗಿದ್ದು, ಅಂದರೆ ಸ್ವಭಾವತಃ ಮೃದುವಾಗಿದೆ. ಅಲ್ಲದೆ ಮನುಷ್ಯರ ಮೇಲೆ ದಾಳಿ ನಡೆಸಿದ ಪ್ರಸಂಗಗಳು, ಅದನ್ನು ಹಿಡಿಯುವ ಮೊದಲು ವರದಿಯಾಗಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಖಾನಾಪುರದ ಆನೆ ಇನ್ನೂ ಸಹ ಚಿಕ್ಕ ವಯಸ್ಸಿನ ಆನೆಯಾಗಿದ್ದು, ಅದನ್ನು ಪುನಃ ಕಾಡಿಗೆ ಬಿಡುವುದು ಸೂಕ್ತ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಜನವರಿ 10 ರಿಂದ ಆನೆ ಫಳಗಿಸುವ ಕ್ರಾಲ್ನೊಳಗೆ ಸೇರಿಕೊಂಡಿದ್ದ ಕಾಡಾನೆಗೆ ಕಳೆದ 10 ದಿನಗಳಿಂದ ಯಾವುದೇ ತರಬೇತಿ ನೀಡಲಾಗಿಲ್ಲ. ಅದರ ಆರೋಗ್ಯ ಪರೀಕ್ಷೆಗಳು ಮಾತ್ರ ನಡೆದಿದೆ ಎನ್ನಲಾಗುತ್ತಿದೆ. ಖಾನಾಪುರದ ಆನೆಯನ್ನು ಇಟ್ಟುಕೊಳ್ಳುವುದೋ ಕಾಡಿಗೆ ಬಿಟ್ಟು ಬಿಡುವುದೋ ಎನ್ನುವ ಗೊಂದಲ್ಲಿಯೇ 10 ದಿನಗಳು ಕಳೆದು ಹೋಗಿದೆ. ಇನ್ನೂ ಆನೆಗೆ ರೇಡಿಯೋ ಕಾಲರ್ ಅಳವಡಿಸುವ ವಿಚಾರವೂ ಅರಣ್ಯ ಇಲಾಖೆಯಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವ ಕಾಡಿಗೆ ಕಾಡಾನೆಯನ್ನು ಬಿಡಲಾಗುತ್ತಿದೆ ಎಂಬ ಮಾಹಿತಿ ಸೀಕ್ರೆಟ್ ಆಗಿದ್ದು, ಈ ನಿಟ್ಟಿನಲ್ಲಿ ಕಾಡಂಚಿನ ಜನರಲ್ಲಿ ತಮ್ಮೂರಿನ ಕಾಡಿಗೆ ಬಿಟ್ಟರೆ ಕಷ್ಟನಪ್ಪ ಎಂಬ ಆತಂಕವು ಕಾಡುತ್ತಿದೆ.
SUMMARY | The forest department is planning to shift the Khanapur elephant, which was captured in the Karambal forest near Khanapur in Belagavi district, back to the forest from the Sakrebail elephant camp.
KEY WORDS | forest department is planning to shift the Khanapur elephant back to the forest, captured in the Karambal forest ,Khanapur in Belgaum district, Sakrebail elephant camp