SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 24, 2024
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕಳೆದ ಮೇ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿತ್ತಷ್ಟೆ ಅಲ್ಲದೆ ಅಕ್ರಮ ಹಣ ವರ್ಗಾವಣೆ ಸರ್ಕಾರದಲ್ಲಿಯು ಹಲ್ಚಲ್ ಮೂಡಿಸಿತ್ತು. ಆನಂತರ ನಡೆದ ಬೆಳವಣಿಗೆಗಳ ನಡುವೆ ಚಂದ್ರಶೇಖರನ್ರವರ ಕುಟುಂಬ, ತಮ್ಮವರ ಸಾವಿಗೆ ನ್ಯಾಯ ಕೊಡಿಸುವಂತೆ ತಮ್ಮ ಮನೆಗೆ ಬಂದವರ ಬಳಿ ಅಲವತ್ತುಕೊಳ್ಳುತ್ತಲೇ ಬಂದಿತ್ತು. ಚಂದ್ರಶೇಖರನ್ ಪತ್ನಿ ಹಾಗೂ ಮಕ್ಕಳ ನ್ಯಾಯದ ಹೋರಾಟದ ನಡುವೆ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನ ನೀಡಿದೆ.

ಮೃತ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹಲವರಿಂದ ಆಗ್ರಹ ವ್ಯಕ್ತವಾಗಿತ್ತು. ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿತ್ತು. ಇದೆಲ್ಲದರ ನಡುವೆ ಸರ್ಕಾರ ತಾನು ನೀಡಿದ್ದ ಪರಿಹಾರದ ಭರವಸೆಯನ್ನು ಇವತ್ತು ಈಡೇರಿಸಿದೆ.
ಈ ಕುರಿತಾಗಿ ದಿನಾಂಕ: 19-07-2024 ರಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ, ಅಭಿವೃದ್ಧಿ ನಿಗಮದ ಕಛೇರಿ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಇವತ್ತು ಸಿಎಂ ಸಿದ್ದರಾಮಯ್ಯ 25 ಲಕ್ಷ ರೂಪಾಯಿಗಳ ಚೆಕ್ನ್ನ ಮೃತ ಚಂದ್ರಶೇಖರನ್ ರವರ ಪತ್ನಿಗೆ ಹಸ್ತಾಂತರಿಸಿದ್ದಾರೆ. ಇವತ್ತು ಸಂಜೆ ಹೊತ್ತಿಗೆ ಈ ಚೆಕ್ನಲ್ಲಿನ ಹಣ ಚಂದ್ರಶೇಖರನ್ ಪತ್ನಿ ಕವಿತಾರವರ ಖಾತೆಗೆ ಜಮೆ ಆಗಲಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದೆ ಪ್ರಕಟಣೆಯಲ್ಲಿ
ದಿನಾಂಕ:18.09.2024ರ ಸರ್ಕಾರದ ಆದೇಶದಂತೆ ದಿವಂಗತ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಖಜಾನೆ ಬಿಲ್ ಸಲ್ಲಿಸಲಾಗಿದ್ದು, ಇಂದು ಸಂಜೆ 4.30ರ ಒಳಗಾಗಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ವಿನೋಬನಗರ ಪೊಲೀಸ್ ಠಾಣೆ
ಇನ್ನೂ ವಿನೋಬನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆ-1989ರಡಿ ಸಿಐಡಿಯ ವಿಶೇಷ ತನಿಖಾ ತಂಡ(Special Investigation Team)ವು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯಡಿ ಪರಿಹಾರ
ಇದರ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯ ನಿಯಮಗಳಂತೆ ರೂ.8.25 ಲಕ್ಷಗಳನ್ನು ಸಹ ಚಂದ್ರಶೇಖರನ್ ಕುಟುಂಬಕ್ಕೆ ಮಂಜೂರು ಮಾಡಲಾಗಿದೆ. ಜೊತೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಿಂದ ಪಾವತಿಸಬೇಕಾದ ಸಂಬಳ ಮತ್ತು ರಜೆ ನಗದೀಕರಣಗಳಿಗೆ ಸಂಬಂಧಿಸಿದ ರೂ.1,41,361ಗಳನ್ನು ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.
ಶಿವಮೊಗ್ಗ ಸಚಿವ, ಶಾಸಕರ ಉಪಸ್ಥಿತಿ
ಜೊತೆಯಲ್ಲಿ ಚಂದ್ರಶೇಖರನ್ರವರ ಮಗನಿಗೆ ಉದ್ಯೋಗ ನೀಡುವ ಕುರಿತು ಕ್ರಮವಹಿಸಲಾಗುತ್ತಿದೆ ಎಂದು ಸರ್ಕಾರವೇ ತಿಳಿಸಿದೆ. ಇವತ್ತು ಬೆಂಗಳೂರಿನಲ್ಲಿ ಚೆಕ್ ವಿತರಿಸುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪರವರು ಕುಟುಂಬಸ್ಥರ ಪರವಾಗಿ ಸಿದ್ದರಾಮಯ್ಯರ ಬಳಿಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.
ಪರಿಹಾರ ವಿತರಣೆಯ ಸಂದರ್ಭದಲ್ಲಿ ಮೃತರ ಕುಟುಂಬಸ್ಥರ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಲವೊಂದು ಸಲಹೆಗಳನ್ನ ಸಹ ನೀಡಿದರಷ್ಟೆ ಅಲ್ಲದೆ ದೈರ್ಯ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ತುಂಬಿದರು. ಜೊತೆಯಲ್ಲಿ ಮೃತರ ಮಗ ತಮ್ಮ ಆಶೀರ್ವಾದ ಪಡೆದಾಗ, ಸಮಸ್ಯೆಗಳು ಎದುರಾದಲ್ಲಿ ತಿಳಿಸಿ, ಭವಿಷ್ಯದ ಬಗ್ಗೆ ಯೋಚಿಸಿ ಎಂದು ಧೈರ್ಯ ತುಂಬಿದರು.
ಒಟ್ಟಾರೆ, ಸರ್ಕಾರದ ಈ ಸಹಾಯ ಮೃತ ಚಂದ್ರಶೇಖರನ್ರವರ ಕುಟುಂಬಕ್ಕೆ ಆಸರೆಯಾಗಲಿದ್ದು, ಆ ನಿಟ್ಟಿನಲ್ಲಿ ಶ್ರಮಿಸಿದ ರಾಜಕಾರಣದ ಮನಸ್ಸುಗಳನ್ನು ಮೆಚ್ಚುವಂತದ್ದು.