SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 10, 2025

ಶಿವಮೊಗ್ಗ | ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪನವರ ಪ್ರತಿಮೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಬೇಕೆಂದು ಕೆ.ಪಿ.ಸಿ.ಸಿ. ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಆನ್.ಮೋಹನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಸಹ ಒಂದಾಗಿದೆ. ಇದರಿಂದಾಗಿ ಜಿಲ್ಲೆಯಷ್ಟೇ ಅಲ್ಲ. ಬೇರೆ ಜಿಲ್ಲೆಗಳಿಂದಲೂ ಸಹ ರೋಗಿಗಳು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಇಂತಹ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ಹಾಕಿದ ಕೀರ್ತಿ ಬಂಗಾರಪ್ಪನವರಿಗೆ ಸಲ್ಲುತ್ತದೆ. ಆದ್ದರಿಂದ ಈ ಆಸ್ಪತ್ರೆಯ ಆವರಣದಲ್ಲಿ ಅವರ ಪ್ರತಿಮೆ ಸ್ಥಾಪಿಸುವುದು ಸೂಕ್ತವಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಇಂಧನ ಸಚಿವರಾಗಿದ್ದಾಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದ ವಿದ್ಯುತ್ ವಿತರಣಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಆದರೆ ಇದುವರೆಗೂ ಈ ಆಶಯ ಈಡೇರಿಲ್ಲ. ಬಂಗಾರಪ್ಪನವರ ಮಗ ಮಧು ಬಂಗಾರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈ ಸಂದರ್ಭದಲ್ಲಿ ಬಂಗಾಪ್ಪನವರ ಪ್ರತಿಮೆ ಸ್ಥಾಪಿಸಿದಲ್ಲಿ ಇದಕ್ಕೆ ಮತ್ತಷ್ಟು ಮಹತ್ವ ಬಂದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಗಾರಪ್ಪನವರ ಪಾತ್ರ ಮಹತ್ವದ್ದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಜಾರಿಗೊಳಿಸಿದ ಅಕ್ಷಯ, ಆಶ್ರಯ, ಆರಾಧನಾ ಮತ್ತಿತರೆ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಸಾರ್ವಜನಿಕ ಬದುಕಿನಲ್ಲಿ ಆದರ್ಶರೆನಿಸಿಕೊಂಡವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವ ರೂಢಿ ಇದೆ. ಅಂತೆಯೇ ಬಂಗಾರಪ್ಪನವರ ಪ್ರತಿಮೆ ಸ್ಥಾಪಿಸಿದಲ್ಲಿ ಮಹತ್ವ ಬರುತ್ತದೆ ಎಂದರು.
ನಾವು ಬಂಗಾರಪ್ಪನವರ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕೆಂದು ಕೊಂಡಿದ್ದೇವೆ. ಈ ಪ್ರತಿಮೆಗೆ ಜಾಗ ಗುರುತಿಸಿ ಅದನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ 6 ತಿಂಗಳ ಗಡುವನ್ನು ನೀಡುತ್ತೇವೆ. ಅದರೊಳಗೆ ಈ ಪ್ರತಿಮೆಯನ್ನು ಸ್ಥಾಪಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಈಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈ ಕುರಿತು ಮನವಿ ಸಲ್ಲಿಸುತ್ತಿದ್ದೇವೆ ಎಂದರು.
SUMMARY| Former Chief Minister The statue of S Bangarappa should be installed in the premises of The Meggan Hospital in Shivamogga
KEYWORDS | Meggan Hospital, Former Chief Minister, S Bangarappa, statue,