SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 3, 2025
ಶಿವಮೊಗ್ಗ | ಅಡಿಕೆಗೆ ಕ್ಯಾನ್ಸರ್ ಕಾರಕ ಎಂದು ಹಣೆಪಟ್ಟಿ ಕಟ್ಟಿ ಅಡಿಕೆಯ ಮಾನ ತೆಗೆದಿದ್ದು ಬಿಜೆಪಿ ನೇತೃತ್ವ ಕೇಂದ್ರ ಸರ್ಕಾರ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಆರೋಪಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಿಕೆ ಹಾನಿಕಾರಕ ಎಂದು ಅಫಿಡೆವಿಟ್ ಹಾಕಿರೋದು ಯಾರು ಎಂಬುದನ್ನು ಮಧು ಬಂಗಾರಪ್ಪ ಸ್ಪಷ್ಟಪಡಿಸಲಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಹೇಳಿರುವ ಹೇಳಿಕೆ ಸರಿಯಲ್ಲ. ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ ಅಡಿಕೆ ಕ್ಯಾನ್ಸರ್ ಕಾರಕವೆಂದು ಅಫಿಡವಿಟ್ ಸಲ್ಲಿಸಿದೆ ಎಂದು ಆರಗ ಜ್ಞಾನೇಂದ್ರರವರ ಹೇಳಿಕೆ ಸುಳ್ಳು. ಬಿಜೆಪಿಗರಿಗೆ ಚುಣಾವಣೆ ಸಂದರ್ಭದಲ್ಲಿ ಮಾತ್ರ ಅಡಿಕೆ ನೆನಪಾಗುತ್ತೆ. ಅವರು ಮ್ಯಾಮ್ ಕೋಸ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಡಿಕೆ ಕುರಿತು ಕಾಂಗ್ರೇಸ್ ವಿರುದ್ದ ಸುಳ್ಳು ಹೇಳಿಕೆ ನೀಡುವುದರ ಮೂಲಕ ಅಡಿಕೆ ಬೆಳೆಗಾರರ ಮನ ಒಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಅಡಿಕೆ ಬೆಳೆಗಾರರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡುತ್ತಿರುವುದು ಖಂಡನೀಯ. ಅಡಿಕೆಯ ಮಾನ ಹಾಗೂ ಮೌಲ್ಯವನ್ನು ತೆಗೆದ ಬಿಜೆಪಿ ಅಡಿಕೆ ಬೆಳೆಗಾರರ ಕ್ಷಮೆಯಾಚಿಸಲು ಕಾಂಗ್ರೇಸ್ ಪಕ್ಷ ಒತ್ತಾಯಿಸುತ್ತದೆ ಎಂದರು.
2001 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರದಲ್ಲಿ ಕ್ಯಾಂಕೋ ಅಧ್ಯಕ್ಷರಾದ ಎಸ್.ಆರ್.ರಂಗಮೂರ್ತಿ, ಪಿ.ರಾಮ್ ಭಟ್ ಇನ್ನಿತರ ಬಿಜೆಪಿ ಮುಖಂಡರೊಳಗೊಂಡ ತಜ್ಞರ ಸಮಿತಿ ಅಡಿಕೆ ಕ್ಯಾನ್ಸರ್ ಕಾರಕವೆಂದು ವರದಿ ನೀಡಿರುತ್ತದೆ. 2017 ಹಾಗೂ 2019 ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆರೋಗ್ಯ ಸಚಿವೆ ಅನುಪ್ರಿಯ ಪಟೇಲ್ ಹಾಗೂ ಅಶ್ವಿನ್ ಕುಮಾರ್ ಚೌಬೆ ಅಡಿಕೆ ಕ್ಯಾನ್ಸರ್ಕಾರವೆಂದು ಸಂಸತ್ ಅಧಿವೇಶನದಲ್ಲಿ ಲಿಖಿತ ಹೇಳಿಕೆ ನೀಡಿರುತ್ತಾರೆ. ಅಲ್ಲದೆ, 2021 ರಲ್ಲಿ ಜಾರ್ಖಂಡ್ ಬಿಜೆಪಿ ಎಂ.ಪಿ ನಿಶಿಕಾಂತ್ ದುಬೆ ಅಡಿಕೆ ನಿಷೇಧಿಸುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿರುತ್ತಾರೆ. 2022 ರಲ್ಲಿ ಮೋದಿ ಸರ್ಕಾರದ ಕೇಂದ್ರ ಆರೋಗ್ಯ ಸಚಿವರ ಮಾನ್ಸ್ಸುಖ್ ಮಾಂಡವೀಯ ಅಡಿಕೆಯ ಮಾನವ ಬಳಕೆ ನಿಷೇಧಿಸುವ ಬಗ್ಗೆ ಹೇಳಿಕೆ ನೀಡಿರುತ್ತಾರೆ. 2021 ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಅಡಿಕೆಯನ್ನು ‘ಕೃಷಿ ಮಾರಾಟ ವಾಹಿನಿ ವೆಬ್ಸೈಟ್’ನಲ್ಲಿ ‘ಮಾದಕ ಉತ್ತೇಜಕ’ ಪಟ್ಟಿಗೆ ಸೇರಿಸಿ ಅಡಿಕೆ ಮಾನ ಕಳೆದಿರುತ್ತಾರೆ ಎಂದು ಆರೋಪಿಸಿದರು.
ಸಾರ್ಕ್, ಐಎಸ್ಎಫ್ಟಿಎ ಮತ್ತು ಎಸ್ಎಎಫ್ಟಿಎ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಂಡು ಇಂಡೋನೇಷಿಯ ದೇಶದಿಂದ ಶ್ರೀಲಂಕ ಮೂಲಕ ಅಡಿಕೆ ಮರುರಫ್ತುಗೆ ಅವಕಾಶ ಮಾಡಿಕೊಟ್ಟಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಭಾರತ ದೇಶದ ಅಡಿಕೆಗೆ ಕಡಿಮೆ ಬೆಲೆ ಸಿಗಲು ನರೇಂದ್ರ ಮೋದಿ ಸರ್ಕಾರ ಕಾರಣವಾಗಿದೆ.
2013ರಲ್ಲಿ ಅಕ್ರಮ ಕಳ್ಳ ಸಾಗಾಣಿಕೆ ಅಡಿಕೆಯನ್ನು ತಡೆದಿದ್ದರಿಂದ ಅಡಿಕೆಯ ಬೆಲೆ 70000 ವರೆಗೆ ತಲುಪಿತ್ತು. ಆದರೆ ಈಗ ಅಡಿಕೆಯ ಕನಿಷ್ಠ ಖರೀದಿ ದರ ರೂ 351 ಗಳು ಪ್ರತಿ ಕೆಜಿಗೆ ಹೆಚ್ಚಿಸಿದರೂ ಸಹ ಕೇಂದ್ರ ಸರ್ಕಾರ ಅಕ್ರಮ ಅಡಿಕೆಗೆ ಅವಕಾಶ ಕೊಟ್ಟಿದ್ದರಿಂದ ನಮ್ಮ ದೇಶದ ರೈತರ ಉತ್ತಮ ಗುಣಮಟ್ಟದ ಅಡಿಕೆಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ.
ದೇಶಿಯ ಮಾರುಕಟ್ಟೆಯಲ್ಲಿ ಸಾವಿರಾರು ಟನ್ ಅಡಿಕೆ ದಾಸ್ತಾನಿದ್ದರೂ ಸಹ ಭೂತಾನ್ ದೇಶದಿಂದ 17000 ಮೆಟ್ರಿಕ್ ಟನ್ ಅಡಿಕೆ ಅಮದು ಮಾಡಿದ್ದು, ಗುಟ್ಕಾ ಕಂಪನಿಯ ಮಾಲೀಕರ ಅನುಕೂಲಕ್ಕಲ್ಲವೇ? ಕೇಂದ್ರ ಬಜೆಟ್ನಲ್ಲಿ ಬಿಹಾರದ ಮಖೇನಾ ಬೆಳೆಗೆ ಮಂಡಳಿ ರಚನೆಗೆ ಅವಕಾಶ ಕಲ್ಪಿಸಿ ಅಂತರಾಷ್ಟ್ರೀಯ ಬೆಳೆಯಾದ ಅಡಿಕೆ ಮಂಡಳಿ ರಚನೆಗೆ ವಿರೋಧ ಏಕೆ? ಇದು ಅಡಿಕೆ ಬೆಳೆಗಾರರಿಗೆ ಎಸಗಿದ ದ್ರೋಹ ಅಲ್ಲವೇ? ಎಂದು ಪ್ರಶ್ನಿಸಿದರು.
Summary | Ramesh Hegde, president of the District Arecanut Growers’ Association, alleged that the BJP-led central government had defamed arecanut by labelling it as carcinogenic.
Keywords | Ramesh Hegde, District Arecanut Growers, bjp, congress,