shivamogga traffic police: ಸಾಮಾನ್ಯವಾಗಿ ರಸ್ತೆಯಲ್ಲಿ ಅಪಘಾತವಾದಾಗ ಹೆಚ್ಚಿನ ಜನರು ಅಪಘಾತವಾದವರ ರಕ್ಷಣೆಗೆ ಧಾವಿಸಲು ಹಿಂದೇಟು ಹಾಕುತ್ತಾರೆ. ಇದ್ಯಾರಿಗೆ ಬೇಕು ಪೊಲೀಸ್ ಕೇಸ್ ಆದ್ರೆ ನಮಗೆಲ್ಲಾ ಸುಮ್ಮನೆ ತೊಂದರೆ ಯಾಕೆ ಎಂದು ಹೆದರುವವರೇ ಜಾಸ್ತಿ. ಇದರ ನಡುವೆ ಇಲ್ಲೊಬ್ಬರು ಅಪಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಜೀವ ಉಳಿಸಲು ನೆರವಾಗಿದ್ದಾರೆ.
shivamogga traffic police: ಮಳೆಯನ್ನೂ ಲೆಕ್ಕಿಸದೆ ಜೀವ ಉಳಿಸಿದ ಪುಣ್ಯಾತ್ಮ
ಏಪ್ರಿಲ್ 05 ರಂದು ಶಿವಮೊಗ್ಗದ ಶಂಕರಮಠದ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅಂದಿನ ದಿನ ವಿಪರೀತ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಅದನ್ನು ನೋಡಿದ ಶಿವಮೊಗ್ಗದ ನಂಜುಂಡೇಶ್ವರ ಎಂಬುವವರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಬೈಕ್ ಸವಾರನನ್ನು ಎತ್ತಿ ಉಪಚರಿಸಿ ನಂತರ ಆಂಬ್ಯುಲೆನ್ಸ್ ಕಾಲ್ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್ಗೆ ಸವಾರನನ್ನು ಹಾಕಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗೆ ಸಮಯ ಪ್ರಜ್ಞೆಯನ್ನು ತೋರುವುದರ ಮೂಲಕ ವೈದ್ಯರಿಗೆ ತಕ್ಷಣ ಚಿಕಿತ್ಸೆಯನ್ನು ಒದಗಿಸಲು ನೆರವಾಗಿ ಸವಾರನ ಜೀವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನಲೆ ಅವರ ಸಾಹಸವನ್ನು ಮೆಚ್ಚಿ ಶಿವಮೊಗ್ಗ ನಗರ ಸಂಚಾರ ಪೊಲೀಸರು ಅವರಿಗೆ ಜೀವ ರಕ್ಷಕ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ
