Chatpat news : ಎಕ್ಸ್ಎಲ್ ಬೈಕ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪಿಕಾಪ್
ಭದ್ರಾವತಿಯಲ್ಲಿ ಟಿವಿಎಸ್ ಎಕ್ಸ್ಎಲ್ ಬೈಕ್ ಮತ್ತು ಅಡಿಕೆ ಸುಲಿಯುವ ಯಂತ್ರವನ್ನು ಸಾಗಿಸುತ್ತಿದ್ದ ಪಿಕಾಪ್ ನಡುವೆ ಡಿಕ್ಕಿ ಸಂಭವಿಸಿ ಪಿಕಾಪ್ ಮಗುಚಿ ಬಿದ್ದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Chatpat news : ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಜುಲೈ 12ರ ರಾತ್ರಿ ಹುಂಡಿ ಕಳ್ಳತನ ನಡೆದಿದೆ. ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು 60,000 ರೂಪಾಯಿ ಕಾಣಿಕೆ ಹಣವನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಕಳ್ಳತನದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 13ರ ಬೆಳಗ್ಗೆ ಸ್ವಚ್ಛತಾ ಕಾರ್ಯಕ್ಕೆ ಬಂದ ಜಯಣ್ಣ ಎಂಬುವವರು ಘಟನೆಯನ್ನು ಬೆಳಕಿಗೆ ತಂದಿದ್ದಾರೆ.

ಶಿವಮೊಗ್ಗದಲ್ಲಿ ಗಾಂಜಾ ಮಾರಾಟಗಾರರ ಬಂಧನ: 1.70 ಲಕ್ಷ ರೂ. ಮೌಲ್ಯದ ಗಾಂಜಾ ವಶ


ಶಿವಮೊಗ್ಗ ನಗರದ ವಡ್ಡಿನಕೊಪ್ಪದ ರಂಗನಾಥ ಲೇಔಟ್ ಸಮೀಪದ ಕೋಳಿ ಫಾರಂ ಶೆಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗದ ಬೊಮ್ಮನಕಟ್ಟೆ ನಿವಾಸಿ ಕಾರ್ತಿಕ್ ಅಲಿಯಾಸ್ ಸಾಪಡ್ (21) ಮತ್ತು ಕಡೇಕಲ್ ನಿವಾಸಿ ಎನ್. ರಾಜೇಶ್ ಅಲಿಯಾಸ್ ರಾಜು (24) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 1.70 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ 789 ಗ್ರಾಂ ಒಣ ಗಾಂಜಾ ಮತ್ತು ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.