SHIVAMOGGA | MALENADUTODAY NEWS | Aug 17, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಮಧು ಬಂಗಾರಪ್ಪ ಇವತ್ತು ಮಹಾನಗರಪಾಲಿಕೆಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಭೆಯ ಪ್ರಮುಖ ಅಂಶಗಳು ಹೀಗಿವೆ.
ಪರಿಶೀಲನಾ ಸಭೆಯಲ್ಲಿ ಪ್ರಮುಖವಾಗಿ ಮಧು ಬಂಗಾರಪ್ಪ ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯೂನ್ಯತೆಗಳ ಪಟ್ಟಿಯನ್ನು ತಮಗೆ ನೀಡುವಂತೆ ತಿಳಿಸಿದರು.
ಈ ವಿಚಾರದಲ್ಲಿ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40 ಎಕರೆಯಲ್ಲಿ ಒಟ್ಟು 3000 ಮನೆಗಳು ಮಂಜೂರಾಗಿದ್ದು 624 ಮನೆಗಳನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದು 225 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 399 ಮನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಾಲ ಪ್ರಕ್ರಿಯೆ ನಡೆಯುತ್ತಿದೆ. ಫಲಾನುಭವಿಗಳಿಗೆ ಬ್ಯಾಂಕ್ನಿಂದ ಸಾಲ ಮಂಜೂರಾದ ತಕ್ಷಣ ಹಸ್ತಾಂತರಿಸಲಾಗುವುದು. 648 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1728 ಮನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಇನ್ನೂ ಎಂಎಲ್ಸಿ ಬಲ್ಕೀಶ್ ಬಾನುರವರು ಮಾತನಾಡಿ, ಮನೆಗಳನ್ನು ಹಸ್ತಾಂತರಿಸಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಇತರೆ ಸೌಲಭ್ಯಗಳೇ ಇಲ್ಲ. ಇದನ್ನೆಲ್ಲ ಶೀಘ್ರವಾಗಿ ಒದಗಿಸುವಂತೆ ತಿಳಿಸಿದರು.
ಇದೇ ವೇಳೆ ಶಾಸಕರಾದ ಚನ್ನಬಸಪ್ಪರವರು ಮಾತನಾಡಿ ಪಾಲಿಕೆ ವತಿಯಿಂದ ಈ ವಸತಿ ಯೋಜನೆಗೆ ರೂ.25 ಕೋಟಿ ನೀಡಬೇಕಿದ್ದು ಈವರೆಗೆ ರೂ.9 ಕೋಟಿ ನೀಡಲಾಗಿದೆ. ಹಿಂದಿನ ಸಭೆಯಲ್ಲಿ ಆಯುಕ್ತರು ಇತರೆ ಹೆಡ್ನಲ್ಲಿ ಉಳಿಕೆ ಹಣವನ್ನು ನೀಡುವುದಾಗಿ ತಿಳಿಸಿದ್ದರು. ಉಳಿದ ಹಣವನ್ನು ನೀಡುವಂತೆ ತಿಳಿಸಿದರು.
ಉತ್ತರವಾಗಿ ಆಯುಕ್ತರು ಮಾತನಾಡಿ, ಪಾಲಿಕೆಯಿಂದ ಈಗಾಗಲೇ ರಸ್ತೆ ಹಾಗೂ ತುರ್ತಾಗಿ ನೀರಿನ ಅಗತ್ಯ ನೀಗಿಸಲು 3 ಬೋರ್ವೆಲ್ ಕೊರೆಸಲಾಗಿದೆ, 288 ಮನೆಗಳಿಗೆ ಯುಜಿಡಿ, ಕುಡಿಯುವ ನೀರು ನೀಡಲಾಗಿದೆ. 336 ಮನೆಗಳಿಗೆ ಬೋರ್ ವೆಲ್ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ರೂ.10.5 ಕೋಟಿ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಶಾಸಕರಾದ ಚನ್ನಬಸಪ್ಪ ಪ್ರತಿಕ್ರಿಯಿಸಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೋವಿಂದಾಪುರ ಗೋಪಿಶೆಟ್ಟಿಕೊಪ್ಪ ಒಂದೆಡೆಯಾದರೆ, ಸ್ಲಂ ಬೋರ್ಡ್ ಗೆ ಸಂಬಂಧಿಸಿದಂತೆ 1500 ಮನೆಗಳ ಸಮಸ್ಯೆಯೂ ಇದೆ. ಗೋವಿಂದಾಪುರದಲ್ಲಿ ಈಗ ಕೇವಲ 60-70 ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಅಲ್ಲಿ ಮೂಲಭೂತ ಸೌಕರ್ಯಗಳಿಗೆ ಶಾಶ್ವತವಾದ ಪರಿಹಾರಗಳನ್ನು ಒದಗಿಸಬೇಕೆಂದರು.
ಈ ಸಂಬಂಧ ಮಾತನಾಡಿದ ಸಚಿವರು ನೀರು, ಯುಜಿಡಿ, ವಿದ್ಯುತ್ ಇತರೆ ಮೂಲಭೂತ ಸೌಕರ್ಯಗಳ ಕುರಿತು ಯೋಜನೆಯಲ್ಲಿ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ಫಲಾನುಭವಿಗಳ ವಂತಿಗೆಯೂ ಹೆಚ್ಚಾಗಿದ್ದು ಅವರಿಗೆ ಹೊರೆಯಾಗಿದೆ. ರೂ.260 ಕೋಟಿ ಮೊತ್ತದಷ್ಟು ದೊಡ್ಡ ಯೋಜನೆಯನ್ನು ಸಮರ್ಪಕವಾಗಿ ಯೋಜಿಸಬೇಕಿತ್ತು. ಅದು ಆಗಿಲ್ಲ. ಇದೀಗ ನ್ಯೂನ್ಯತೆಗಳ ಸಂಪೂರ್ಣ ವರದಿ ತಕ್ಷಣ ನೀಡಿ. ತುರ್ತಾಗಿ ಅವಶ್ಯಕವಾಗಿ ಆಗಬೇಕಿರುವ ಕೆಲಸಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಮೂಲಕ ತಮಗೆ ಒಂದು ಸೋಮವಾರದ ಒಳಗೆ ವರದಿ ನೀಡಿ. ಸರ್ಕಾರದಿಂದ ರೂ.10 ರಿಂದ 15 ಕೋಟಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದರು
ಪಾಲಿಕೆ ಆಯುಕ್ತರು, 2024-5 ನೇ ಸಾಲಿನ ಜುಲೈವರೆಗೆ ಒಟ್ಟು 4626.31 ಲಕ್ಷ, ರೂ.2872.13 ವೆಚ್ಚವಾಗಿದ್ದು ರೂ.1754.18 ಲಕ್ಷ ಉಳಿಕೆಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಎಕ್ಸಟ್ರಾಕ್ಟ್ ತೆಗೆದುಕೊಳ್ಳಲು ಹೋದಾಗ ಕಳೆದ 8 ರಿಂದ 10 ವರ್ಷ ನಿರಂತರವಾಗಿ ತೆರಿಗೆ ಕಟ್ಟಿದ್ದರೂ ಸಹ ಅದರ ಹಿಂದಿನ 8 ರಿಂದ 10 ವರ್ಷಗಳ ತೆರಿಗೆಯನ್ನು ಪಾವತಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳ ಆದಂತೆ ಆಗುತ್ತಿದೆ ಎಂದು ದೂರಿದರು. ಸಚಿವರು, ಪಾಲಿಕೆಯವರು ತಮ್ಮ ಸಾಫ್ಟ್ವೇರ್ನಲ್ಲಿ ಅಗತ್ಯವಾದ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಹಾಗೂ ನಗರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ದೂರುಗಳಿದ್ದು ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು, ವಿದ್ಯುತ್, ಯುಜಿಡಿ ಇತರೆ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕೆಂದರು.
24*7 ಕುಡಿಯುವ ನೀರಿನ ಯೋಜನೆ
ಸ್ಮಾರ್ಟ್ ಸಿಟಿ ಯೋಜನೆಯಡಿ 24*7 ಕುಡಿಯುವ ನೀರಿನ ಯೋಜನೆಯಡಿ 59 ಝೋನ್ಗಳ ಪೈಕಿ 18 ಝೋನ್ಗಳಲ್ಲಿ ಸಂಪರ್ಕ ನೀಡಲಾಗಿದ್ದು ಎಲ್ಲ ಝೋನ್ಗಳಲ್ಲಿ ಸಂಪರ್ಕ ನೀಡಿದ ನಂತರ ಬಿಲ್ ನೀಡಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.
ತುಂಗಾನದಿ ಮಾಲಿನ್ಯ ತಡೆಯಿರಿ :
ಕಾಡಾ ಅಧ್ಯಕ್ಷರಾದ ಡಾ.ಅಂಶುಮನ್ ಮಾತನಾಡಿ, ತುಂಗಾ ಎಡ ಮತ್ತು ಬಡದಂಡೆ ಕಾಲುವೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನೇರವಾಗಿ ಕಲುಷಿತ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗಿ ಕೃಷಿಗೆ ಕೂಡ ಯೋಗ್ಯವಾಗಿಲ್ಲ, ಜನ-ಜಾನುವಾರುಗಳ ಆರೋಗ್ಯಕ್ಕೂ ಈ ನೀರು ಮಾರಕವಾಗಿದೆ. ಈ ಮಾಲಿನ್ಯ ತಡೆಗಟ್ಟಬೇಕೆಂದು ಮನವಿ ಮಾಡಿದರು.
ಕರ್ನಾಟಕ ನೀರು ಮಂಡಳಿ ಎಇಇ ಮಿಥುನ್ ಕುಮಾರ್ ಮಾತನಾಡಿ, ಒಳಚರಂಡಿ ನೀರನ್ನು ಸಂಸ್ಕರಣಾ ಘಟಕದಿಂದ ಶುದ್ದೀಕರಿಸಿ ನದಿಗೆ ಬಿಡಲಾಗುತ್ತಿದೆ, ಬಚ್ಚಲು, ಶೌಚಾಲಯದ ಗ್ರೇವಾಟರ್ನ್ನು ಒಳಚರಂಡಿ ನೀರಿಗೆ ಸಂಪರ್ಕ ಒದಗಿಸಿದರೆ ಅದನ್ನು ಸಂಸ್ಕರಿಸಿ ಬಿಡಲಾಗುವುದು. 80 ಸಾವಿರ ಮನೆಗಳ ಪೈಕಿ 42 ಸಾವಿರ ಮನೆಗಳ ತ್ಯಾಜ್ಯ ನೀರು ಶುದ್ದೀಕರಣಕ್ಕೆ ಒಳಗಾಗುತ್ತಿದೆ. ಗ್ರೇವಾಟರ್ನ್ನೂ ಕೂಡ ಸಂಸ್ಕರಿಸಿದಲ್ಲಿ ಮಾಲಿನ್ಯ ತಡೆಗಟ್ಟಬಹುದು ಎಂದರು.
ಸಚಿವರು, ಅನಧಿಕೃತ ಗ್ರೇ ಮತ್ತು ಬ್ಲಾಕ್ ವಾಟರ್ ನದಿ ಸೇರದಂತೆ ತಡೆಯಬೇಕು. ಪ್ರತಿ ಮನೆಗಳ ಒಳಚರಂಡಿ, ಗ್ರೇವಾಟರ್ ಶುದ್ದೀಕರಣಕ್ಕೆ ಒಳಗಾಗುವಂತೆ ಕ್ರಮ ವಹಿಸಬೇಕು ಎಂದರು ಹೇಳಿದರು. ಹಾಗೂ ಶಾಸಕರು ಸಭೆಯಲ್ಲಿ ತಿಳಿಸಿದಂತೆ ಕಾವೇರಿ ನದಿ ಮಾಲಿನ್ಯ ತಡೆ ಸಮಿತಿ ರಚನೆಯಂತೆ ತುಂಗ-ಭದ್ರಾ ನದಿ ಮಾಲಿನ್ಯ ತಡೆಯಲು ಸಮಿತಿ ರಚನೆಗೆ ಪ್ರಸ್ತಾವನೆ ಸಿದ್ದಪಡಿಸುವಂತೆ ತಿಳಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯ ಕೆರೆ ಮತ್ತು ಉದ್ಯಾನಗಳ ನಿರ್ವಹಣೆ ಸಂಬಂಧಿಸಿದಂತೆ ಮಾಹಿತಿಯನ್ನು ತಮಗೆ ನೀಡುವಂತೆ ತಿಳಿಸಿದ ಅವರು ಪಾಲಿಕೆ ವ್ಯಾಪ್ತಿಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಸ್ಥಳೀಯ ಪ್ರದೇಶ ಅಭಿವೃದ್ದಿ ವ್ಯಾಪ್ತಿಯಲ್ಲಿ ಹೊಸದಾಗಿ 23 ಗ್ರಾಮಗಳನ್ನು ಸೇರ್ಪಡೆಗೊಳಿಸುವ ವಿಷಯ ಪರಿಶೀಲನಾ ಹಂತದಲ್ಲಿದೆ ಎಂದರು ತಿಳಿಸಿದರು.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ