SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 4, 2025
ಶಿವಮೊಗ್ಗ | ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾ.7 ರಂದು ಬಜೆಟ್ ಮಂಡನೆ ಮಾಡಲಿದೆ. ಸಿದ್ದರಾಮಯ್ಯನವರ ಬಜೆಟ್ನ್ನು ಸಮಗ್ರವಾಗಿ ಹಾಗೂ ವಿಮರ್ಷಾತ್ಮಕವಾಗಿ ವಿಶ್ಲೇಷಣೆಗೊಳಪಡಿಸಲು ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಮಾ.12 ಮತ್ತು 13 ರಂದು ‘ಜನಚಳುವಳಿಗಳ ಬಜೆಟ್ ಅಧಿವೇಶನ’ವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಹೋರಾಟ – ಕರ್ನಾಟಕದ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಅಧಿವೇಶನ ಕೇವಲ ಆಯ-ವ್ಯಯದ ಬಜೆಟ್ ಮಂಡನೆಗೆ ಮಾತ್ರ ಸೀಮಿತವಾಗದೆ ಜನಪರ ನೀತಿಗಳನ್ನು ರೂಪಿಸುವ ದಿಟ್ಟ ಹೆಜ್ಜೆಯನ್ನಿಡುವಂತಿರಲಿ. ಗ್ಯಾರೆಂಟಿ ಯೋಜನೆಯೊಂದನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ರೈತರ ಸಮಸ್ಯೆ ಬಗ್ಗೆ ಚರ್ಚಿಸುತ್ತಿಲ್ಲ. ಹಾಗಾಗಿ ಸರ್ಕಾರ ಬಜೆಟ್ ಕುರಿತು ವಿವಿಧ ಕೋನಗಳಿಂದ ಚರ್ಚೆ ನಡೆಸಿ ಸಮಗ್ರ ನಿಲುವನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೂ ಮುಂದಿನ ಹೋರಾಟದ ಸ್ವರೂಪದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಅಧಿಕಾರಕ್ಕೇರುವ ಮುನ್ನ ರೈತರ, ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಎರಡು ವರ್ಷವಾದರೂ ಅವ್ಯಾವುದನ್ನೂ ಬಗೆಹರಿಸಿಲ್ಲ. ಈ ಬಾರಿಯ ಬಜೆಟ್ ನಲ್ಲಾದರೂ ಇವುಗಳನ್ನು ಜಾರಿಗೊಳಿಸುವುದಾಗಿ ಘೋಷಿಸಬೇಕೆಂದು ಆಗ್ರಹಿಸಿದರು.
ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಬಗರ್ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನು ತೊಡಕನ್ನು ಕಾರಣವಾಗಿ ನೀಡಿ ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ 4 ಕೋಡ್ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅಂತರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಬಗೆಯ ಅಸಂಘಟಿತ, ಅನೌಪಚಾರಿಕ, ಸ್ಕೀಂ, ಗುತ್ತಿಗೆ ಮುಂತಾದ ಬಗೆಯ ಕಾರ್ಮಿಕರು ಹಾಗೂ ನೌಕರರ ಉದ್ಯೋಗ ಭದ್ರತೆ, ಸಾಮಾಜಿಕ ಕಲ್ಯಾಣ ಹಾಗೂ ಘನತೆಯ ವೇತನಕ್ಕಾಗಿ ಸಮಗ್ರ ನೀತಿಯನ್ನು ರೂಪಿಸಬೇಕು. ಎಸ್ ಸಿ ಪಿ ಎಸ್ / ಎಸ್ ಟಿ ಪಿ ಎಸ್ ನಿಧಿಯ ದುರಪಯೋಗವನ್ನು ತಡೆಯಬೇಕು. ಗ್ಯಾರಂಟಿ ಯೋಜನೆಗಳಿಗೂ ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರನ್ನು ವಿಶೇಷವಾಗಿ ಮಹಿಳೆಯರನ್ನು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಮಾರ್ಯದೆಗೇಡು ಹತ್ಯೆ ಮುಂತಾದ ಹಿಂಸೆಗಳಿಂದ ಮಹಿಳೆಯರನ್ನು ಪಾರು ಮಾಡಲು ಪಾರುಮಾಡಲು ಸಮಗ್ರ ನೀತಿ ರೂಪಿಸಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯನ್ನು ತಿರಸ್ಕರಿಸಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು ಎಂಬುದನ್ನು ಸೇರಿದಂತೆ ಹನ್ನೆರಡು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
SUMMARY | State Raitha Sangha president H R Basavarajappa demanded that the state government should announce that it will solve the problems of farmers and labourers in this year’s budget.
KEYWORDS | H R Basavarajappa, farmers, state government, budget,