shivamogga news today : ಜೂನ್ 26,2025 ಲೈಂಗಿಕ ಕಿರುಕುಳ ಆರೋಪ : ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್ ಬಂಧನಕ್ಕೆ ಲಾಯರ್ಸ್ ಗಿಲ್ಡ್ ಒತ್ತಾಯ
shivamogga news today : ಶಿವಮೊಗ್ಗ: ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್ ವಿರುದ್ಧ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಬೇಕೆಂದು ಲಾಯರ್ಸ್ ಗಿಲ್ಡ್ನ ಮುಖ್ಯಸ್ಥ ಹಾಗೂ ವಕೀಲ ಕೆ.ಪಿ. ಶ್ರೀಪಾಲ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳ ಪ್ರಕರಣ ಈಗಾಗಲೇ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಕಿರುಕುಳಕ್ಕೆ ಒಳಗಾದ ವೈದ್ಯ ವಿದ್ಯಾರ್ಥಿನಿ ದೂರು ನೀಡಿದ್ದರೂ, ಐದು ದಿನಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಎಫ್ಐಆರ್ ದಾಖಲಾಗಿದ್ದರೂ ಇದುವರೆಗೂ ಆರೋಪಿಯನ್ನು ಬಂಧಿಸದಿರುವುದು ಅಚ್ಚರಿ ಮೂಡಿಸಿದೆ. ಕೂಡಲೇ ಆತನನ್ನು ಬಂಧಿಸಬೇಕು ಎಂದು ಶ್ರೀಪಾಲ್ ಆಗ್ರಹಿಸಿದರು.
shivamogga news today : ಈ ಘಟನೆಗೆ ಸಂಬಂಧಿಸಿದಂತೆ ಸಿಮ್ಸ್ ಆಡಳಿತ ಮಂಡಳಿ ಕೂಡ ಸಂತ್ರಸ್ತೆಯ ಪರವಾಗಿ ನಿಲ್ಲದೆ, ಆರೋಪಿಯ ಪರವಾಗಿಯೇ ಇದೆ .. ಸಿಮ್ಸ್ ಅಧೀಕ್ಷಕ ವಿರುಪಾಕ್ಷಪ್ಪ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆರೋಪಿಯ ಪರವಾಗಿ ನಿಲ್ಲುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಪೊಲೀಸರು ಕೂಡ ಸುಮ್ಮನಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಶ್ವಿನ್ ಹೆಬ್ಬಾರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಇದೇ ಮೊದಲಲ್ಲ ಎಂದು ಶ್ರೀಪಾಲ್ ತಿಳಿಸಿದರು. ಈ ಹಿಂದೆ ಕಾಶ್ಮೀರ ಮೂಲದ ವೈದ್ಯ ವಿದ್ಯಾರ್ಥಿನಿಯೊಬ್ಬರ ಮೇಲೆ ಕೂಡ ಲೈಂಗಿಕ ಕಿರುಕುಳ ನೀಡಿದ್ದು, ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಿಂದ ಸದ್ಯಕ್ಕೆ ತಡೆಯಾಜ್ಞೆ ಇದ್ದರೂ ಪ್ರಕರಣ ಇತ್ಯರ್ಥವಾಗಿಲ್ಲ. ಇಷ್ಟೆಲ್ಲಾ ಆದರೂ, ಇದೇ ರೀತಿಯ ವರ್ತನೆಯನ್ನು ಈಗ ಮತ್ತೆ ತೋರಿಸಿದ್ದಾರೆ. ಈ ಪ್ರಕರಣವನ್ನು ಕೂಡ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು, ಆದರೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಈಗ ಎಫ್ಐಆರ್ ದಾಖಲಾಗಿದೆ ಎಂದರು.
ಪ್ರಕರಣ ದಾಖಲಾಗುತ್ತಿದ್ದಂತೆ ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾರೆ. ಅವರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಲಾಯರ್ಸ್ ಗಿಲ್ಡ್ ಮೂಲಕವೇ ಹೈಕೋರ್ಟ್ನಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗುವುದು ಎಂದು ಶ್ರೀಪಾಲ್ ಎಚ್ಚರಿಸಿದರು.