SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shimoga hindu mahasaba ganapati
ಶಿವಮೊಗ್ಗದ ಪ್ರಮುಖ ಗಣಪತಿಯಾದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ದಿನಾಂಕ ನಿಕ್ಕಿಯಾಗಿದ್ದು, ಈಗಾಗಲೇ ಸಿದ್ಧತೆಗಳು ಸಹ ಆರಂಭವಾಗಿದೆ. ಇದರ ನಡುವೆ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ಒಂದಷ್ಟು ಕುತೂಹಲ ಕಾರಿ ಅಂಶಗಳನ್ನ ನಿಮಗೆ ತಿಳಿಸುವ ಉದ್ದೇಶ ಮಲೆನಾಡು ಟುಡೆಯದ್ದು
ಹಿಂದೂ ಮಹಾಸಭಾ ಗಣಪತಿ ಶಿವಮೊಗ್ಗ-shimoga hindu mahasaba ganapati
ಆಡು ಭಾಷೆಯಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಹೆಚ್.ಎಂ.ಎಸ್ ಗಣಪ ಎಂದು ಕರೆಯುತ್ತಾರೆ.
ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದು ಸಂಘಟನಾ ಮಹಾ ಮಂಡಳಿ, ಗಣೇಶೋತ್ಸವ ಸಂದರ್ಭದಲ್ಲಿ ಪ್ರತಿಷ್ಟಾಪಿಸುವ ಗಣೇಶಮೂರ್ತಿಯದು.
80-90 ರ ದಶಕದಲ್ಲಿ ಶಿವಮೊಗ್ಗದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅಂದ್ರೆ ಅದು ರೇಡಿಯೋ, ದೂರದರ್ಶನದ ನ್ಯೂಸ್ ನಲ್ಲಿ ಹೆಡ್ ಲೈನ್ ಸುದ್ದಿಯಾಗ್ತಿತ್ತು.
ಮಹಾರಾಷ್ಟ್ರ, ಗುಜರಾತ್, ಅಕ್ಕಪಕ್ಕದ ರಾಜ್ಯಗಳಲ್ಲಿ ಸಾವಿರಾರು ಗಣಪತಿಯನ್ನು ಒಂದೇ ದಿನ ವಿಸರ್ಜನೆ ಮಾಡುವ ವರದಿಗಳಿಗಿಂತಲೂ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವಿಶೇಷವಾಗಿ ಸುದ್ದಿಯಾಗುತ್ತಿತ್ತು
ಲೋಕಮಾನ್ಯ ಬಾಲಗಂಗಾಧರ್ ನಾಥ್ ತಿಲಕ್ ಜನರ ನಡುವೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸುವ ಸಲುವಾಗಿ ದೇಶವ್ಯಾಪಿ ಗಣೇಶೋತ್ಸವ ಪ್ರಾರಂಭಿಸದ ಕಾಲಘಟ್ಟವದು. ಅವರ ಆಶಯದಂತೆ ಶಿವಮೊಗ್ಗದಲ್ಲಿ 1945 ರಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೊಂಡಿತು.
ಅನಂತ ಚತುರ್ದಶಿ ವೇಳೆ ಹಿಂದು ಸಂಘಟನೆ ಮಂಡಳಿಯ ಸಂಸ್ಥಾಪಕ ಮುಖಂಡರುಗಳಾದ ಮಂಜುನಾಥ್ ರಾಯರು, ಚಂದ್ರಶೇಖರ್ ಬೂಪಾಳಂ ನಂತಹ ಹಿರಿಯರ ನೇತ್ರತ್ವದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಯಿತು,.
ಹಿಂದುಮಹಾಸಭಾ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಂಡಳಿ ನೇತ್ರತ್ವದಲ್ಲಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿ ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ಮತ್ತು ಹಿಂದುಮಹಾಸಭಾ ಗಣಪತಿ ಪ್ರತಿಷ್ಟಾಪನೆಗೆ ಇಂಬು ನೀಡಿ, ಹಿಂದು ಯುವಕರನ್ನು ದೇಶ ಮಟ್ಟದಲ್ಲಿ ಸಂಘಟಿಸಬೇಕೆಂದು ಕರೆನೀಡಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ವೈಚಾರಿಕ ಮತ್ತು ಧಾರ್ಮಿಕ ವಿಚಾರೆಧಾರೆಗಳ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭವದು. ಸರ್ಕಾರ ಪ್ರಾರ್ಥನಾ ಮಂದಿರಗಳ ಮುಂದೆ ಮಂಗಳವಾದ್ಯ ನುಡಿಸದಂತೆ ತಡೆಯೊಡ್ಡಿತ್ತು. ಇದನ್ನೂ
ಧಾರ್ಮಿಕ ಸ್ವಾತಂತ್ರ್ಯದ ಸಾವಿಂಧಾನಿಕ ಹಕ್ಕುಚ್ಯುತಿ ಎಂದು ಭಾವಿಸಿದ ಹಿಂದು ಮಹಾ ಮಂಡಳಿ, 1947 ರ ಗಣೇಶೋತ್ಸವ ಸಂದರ್ಭದಲ್ಲಿ ಮಸೀದಿಯ ಮುಂದೆ ಮಂಗಳವಾದ್ಯ ನುಡಿಸಲು ಅಣಿಯಾಯ್ತು.
ಈ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಗಳು ನಡೆದು ಹೋಯ್ತು. ರಾಜಬೀದಿಯಲ್ಲಿ ಮೆರವಣಿಗೆ ನಡೆಯುವ ಸಂದರ್ಭದಲ್ಲಿಯೇ ಶಿವಮೂರ್ತಿ ಎನ್ನುವ 26 ವರ್ಷದ ಯುವಕನನ್ನು ಮತ್ತೊಂದು ಕೋಮಿನ ಗುಂಪು ಹತ್ಯೆಗೈಯಿತು.
ಆನಂತರ ಪೊಲೀಸರೇ ಗಣಪತಿಯನ್ನು ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಪ್ರತಿವರ್ಷ ಗೌರವ ಸಲ್ಲಿಸಲಾಗುತ್ತಿದೆ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾಧಿಸಿ,ಹಿಂದು ಸಂಘಟನೆಯ ಅಧ್ಯಕ್ಷರಾಗಿದ್ದ ಹನುಮಂತರಾಯರು ಕೋರ್ಟ್ ಮೆಟ್ಟಲೇರಿದ್ದರು. 1950 ಜನವರಿ 30 ರಲ್ಲಿ ಹೈಕೋರ್ಟ್, ಸಂಘಟನೆಯ ಪರವಾಗಿ ತೀರ್ಪು ನೀಡಿತು.ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ನೆಡೆಯುವ ಕಾರ್ಯ,ಅದು ಸಂವಿದಾನದತ್ತ ಹಕ್ಕು. ಅದನ್ನು ತಡೆಯಲು ಯಾರಿಗೂ ಅಧಿಕಾವಿಲ್ಲ ಎಂದು ತೀರ್ಪು ನೀಡಿತು.
1975 ರ ತುರ್ತು ಪರಿಸ್ಥಿತಿಯ ಕರಿನೆರಳು ಸಹ ಹಿಂದುಮಹಾಸಭಾ ಗಣೇಶಮೂರ್ತಿಯನ್ನು ಸಹ ತಟ್ಟದೆ ಬಿಟ್ಟಿರ್ಲಿಲ್ಲ.
ಜಿಲ್ಲಾಡಳಿತ, ಮುಜರಾಯಿ ಇಲಾಖೆ ಸುಪರ್ಧಿಗೆ ಒಳಪಟ್ಟಿರುವ, ಭೀಮೇಶ್ವರ ದೇವಸ್ಥಾನದಲ್ಲಿ, ಹಿಂದುಮಹಾ ಸಂಘಟನಾ ಮಂಡಳಿಗೆ, ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡ್ಲಿಲ್ಲ. ಹೀಗಾಗಿ ಸಂಘಟನೆ ಮುಖಂಡರು ಹಬ್ಬದ ಮಾರನೆ ದಿನ ಗಣೇಶನನ್ನು ಪ್ರತಿಷ್ಟಾಪಿಸಿದ್ದು ಕೂಡ ಇಲ್ಲಿ ವಿಶೇಷವೇ.
1976 ರಲ್ಲಿ ಸಹ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡದ ಸಂದರ್ಭದಲ್ಲಿ ಹಬ್ಬದ ಮಾರನೇ ದಿನ ಗಣೇಶನನ್ನು ಕೂರಿಸಲಾಯಿತು. 1976 ರಲ್ಲಿ ನಡೆದ ಗಲಾಟೆಯಿಂದ ಮತ್ತೆ ಗಣೇಶ ಮೂರ್ತಿ ಕೋಟೆ ಪೊಲೀಸ್ ಠಾಣೆಗೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಪೊಲೀಸರೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಆದ ಅನಾಹುತ, ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಗಮನಿಸಿ ಹಿಂದು ಸಂಘಟನೆ ಮಂಡಳಿಯವರು 7 ವರ್ಷಗಳ ಕಾಲ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ರು, ಬೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿಗೆ ಗಣಪನನ್ನು ಸರಳವಾಗಿ ವಿಸರ್ಜನೆ ಮಾಡುತ್ತಿದ್ರು
2009 ರಲ್ಲಿ ನಡೆದ ಸಣ್ಣಪುಟ್ಟ ಗಲಾಟೆ ಹೊರತು ಪಡಿಸಿದ್ರೆ ಶಿವಮೊಗ್ಗ ನಗರದಲ್ಲಿ ಮತ್ತಿನ್ಯಾವತ್ತು ಹೆಚ್ ಎಂ.ಎಸ್ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ದೊಂಬಿ ಗಲಾಟೆಗಳಾದ ಉದಾಹರಣೆಗಳಿಲ್ಲ.
ಇದೀಗ ಪ್ರತಿವರ್ಷವೂ ಸಹ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನ ಶಿವಮೊಗ್ಗದ ಹಬ್ಬದಂತೆ ಸಂಭ್ರಮಿಸಲಾಗುತ್ತಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3