jal jeevan mission : ಜಲಜೀವನ್ ಮಿಷನ್ಗೆ BRP ಜಲಾಶಯದಿಂದ ನೀರು: ಬಲದಂಡೆ ಸೀಳುವ ಪ್ರಸ್ತಾವಕ್ಕೆ ರೈತ ಸಂಘ ವಿರೋಧ
ಶಿವಮೊಗ್ಗ: ಭದ್ರ ಜಲಾಶಯದ ಬಲದಂಡೆಯನ್ನು ಸೀಳಿ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಹರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕೆ.ಟಿ. ಗಂಗಾಧರ್ ಹೇಳಿದ್ದಾರೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರಿ ತೊಂದರೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಅಡಿಯಲ್ಲಿ ತುಮಕೂರು, ಪಾವಗಡ, ಮುಳುಕಮೂಲು ಸೇರಿದಂತೆ ಒಟ್ಟು 1166 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಯಡಿ ಬಲದಂಡೆಯನ್ನು ಸೀಳಿ ಜಾಕ್ವೆಲ್ಗೆ ನೀರನ್ನು ಹರಿಸಿ, ಅಲ್ಲಿಂದ ಈ ಗ್ರಾಮಗಳಿಗೆ ಪಂಪ್ ಮಾಡುವ ಪ್ರಸ್ತಾವವಿದೆ. ಆದರೆ, ಕಾಲುವೆಗಳಲ್ಲಿ ನೀರು ಹರಿಸುವುದು ಅಚ್ಚುಕಟ್ಟುದಾರರಿಗೆ ಮಾತ್ರ ಮೀಸಲಾಗಿದ್ದು, ತರೀಕೆರೆ ಬಳಿ ಕಾಲುವೆ ನೀರನ್ನು ವಿಭಾಗಿಸಿದರೆ ಹರಪ್ಪನಹಳ್ಳಿ, ಮಲೆಬೆನ್ನೂರು ಮತ್ತು ದಾವಣಗೆರೆ ಜಿಲ್ಲೆಯ ರೈತರಿಗೆ ನೀರು ತಲುಪುವುದಿಲ್ಲ. ಇದರಿಂದ ಅಚ್ಚುಕಟ್ಟುದಾರರು ನೀರಿಲ್ಲದೆ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಗಂಗಾಧರ್ ಆತಂಕ ವ್ಯಕ್ತಪಡಿಸಿದರು.
jal jeevan mission ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ ರೈತರ ಆತಂಕವನ್ನು ನಿವಾರಿಸಬೇಕು ಎಂದು ಗಂಗಾಧರ್ ಆಗ್ರಹಿಸಿದರು. ಸರ್ಕಾರ ಹಠವನ್ನು ಬಿಟ್ಟು ರೈತರ ಅನುಕೂಲಕ್ಕೆ ಪೂರಕವಾಗಿ ನಿಲ್ಲಬೇಕು. ಜಲಾಶಯದ ಪಕ್ಕದಲ್ಲೇ ಸೀಳಿ ಜಾಕ್ವೆಲ್ಗೆ ನೀರು ಬಿಡುವುದನ್ನು ನಿಲ್ಲಿಸಿ, ಜಲಾಶಯದ ಸೈಫನ್ ಸಿಸ್ಟಮ್ ಮೂಲಕ ಕುಡಿಯುವ ನೀರನ್ನು ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಭದ್ರ ಜಲಾಶಯದ ಬಲದಂಡೆ ಕಾಲುವೆಯಿಂದ ಈಗಾಗಲೇ ನಾಲ್ಕು ಜಿಲ್ಲೆಗಳಿಗೆ ನೀರು ಹರಿಸಲಾಗುತ್ತಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರಿಗೆ 2.5 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಒದಗಿಸಬೇಕು ಎಂದರು.