SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | ಕೋರ್ಟ್ನಲ್ಲಿ ಜಾಮೀನು ಕೊಡುವಾಗ ಎಚ್ಚರವಿರಲಿ, ನ್ಯಾಯಾಲಯವನ್ನ ಯಾಮಾರಿಸಲು ಹೋದರೆ, ಜೈಲು ಪಾಲಾಗಬೇಕಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತಹ ಘಟನೆಯೊಂದು ಶಿವಮೊಗ್ಗ ಕೋರ್ಟ್ನಲ್ಲಿ ನಡೆದಿದೆ. ಅಲ್ಲದೆ ಈ ಕುರಿತಾಗಿ ಶಿವಮೊಗ್ಗ ಕೋರ್ಟ್ನ ಶಿರೆಸ್ತೆದ್ದಾರ್ ನೀಡಿದ ದೂರಿನನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ/ಅಪರಾಧಿಯೊಬ್ಬರು ಹೈಕೋರ್ಟ್ಗೆ ಅಪೀಲು ಹೋಗಿದ್ದರು. ಅದರಂತೆ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ವಿಷಯದಲ್ಲಿ ಹೈಕೋರ್ಟ್ ಜಾಮೀನುದಾರರು ತೃಪ್ತಿಕರವಾದಲ್ಲಿ ಮಾತ್ರ ಜಾಮೀನು ಮಂಜೂರು ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿತ ವ್ಯಕ್ತಿಯ ಪರವಾಗಿ ಜಾಮೀನು ನೀಡಲು ಮಹಿಳೆಯೊಬ್ಬರು ಮುಂದಾಗಿದ್ದರು.

ಸಾಮಾನ್ಯವಾಗಿ ಕೋರ್ಟ್ನಲ್ಲಿ ಬೇಲ್ ನೀಡಲು ಬರುವವರನ್ನ ನ್ಯಾಯಾದೀಶರು ಪ್ರಶ್ನಿಸುತ್ತಾರೆ. ಖಾತೆ ಅಥವಾ ಪಾಣಿಯನ್ನು ತಂದ ಜಾಮೀನುದಾರರನ್ನು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಆರೋಪಿಯ ಬಗ್ಗೆ ಜಾಮೀನುದಾರರನ್ನ ಪ್ರಶ್ನಿಸುತ್ತಾರೆ. ವಿಚಾರಣೆ ಬಳಿಕ ಜಾಮೀನುದಾರರಿಗೆ ಜಾಮೀನು ಕಲ್ಪಿಸುವ ಅವಕಾಶ ನೀಡಲಾಗುತ್ತದೆ. ಈ ಪ್ರಕರಣದಲ್ಲಿಯು ಮಾನ್ಯ ನಾಯಾದೀಶರು ಜಾಮೀನುದಾರ ಮಹಿಳೆಯನ್ನ ವಿಚಾರಿಸಿದ್ದಾರೆ. ಈ ವಿಚಾರಣೆ ವೇಳೆ ಆಕೆ ಆರೋಪಿತನಿಗೆ ಪರಿಚಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಲ್ಲದೆ ಹಣಕ್ಕಾಗಿ ಸಾಕ್ಷಿ ಹೇಳಲು ಮುಂದಾಗಿರುವುದು ಗೊತ್ತಾಗಿದೆ. ಈ ಸಂಬಂಧ ಕೋರ್ಟ್ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಅದರಂತೆ ಇದೀಗ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.