SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 ಶಿವಮೊಗ್ಗದಲ್ಲಿ ಸಾಗುವಳಿ ಜಮೀನಿನಿಂದ ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇವತ್ತು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲ ಮೇಲೆ ದೊಡ್ಡ ಪ್ರತಿಭಟನೆಯೇ ನಡೆದಿದೆ.
ಹೊಳೆ ಹೊನ್ನೂರು ಹೋಬಳಿಯ ಅರಣ್ಯ ಹಕ್ಕು ಸಮಿತಿ ಮತ್ತು ಬಗರ್ಹುಕುಂ ಸಾಗುವಳಿದಾರರು ಹಾಗೂ ರೈತ ಪರ ಸಂಘಟನೆಗಳು ಇವತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟವನ್ನ ನಡೆಸಿದವು.
ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಅವರುಗಳು ಫಾರಂ ನಂ. 50 ಮತ್ತು 53ರ ಅಡಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಪಡೆದು ಖಾತೆ ಮತ್ತು ಪಹಣಿಯನ್ನು ಪಡೆದಿದ್ದಾರೆ.
ಅವರುಗಳ ಬಳಿ ಜಮೀನ ಹುಕುಂ ಪಟ್ಟಿ ನಕಾಶೆ ಎಲ್ಎನ್ಡಿ ಆದೇಶ ಪ್ರತಿ, ಸಾಗುವಳಿ ಚೀಟಿ, ಮ್ಯೂಟೇಷನ್ ಮತ್ತು ಖಾತೆ, ಪಹಣಿ ಇದ್ದರೂ , ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ನೋಟಿಸು ಕೊಟ್ಟು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಅಲ್ಲದೆ ತಮ್ಮ ಜಮೀನಿನ ಕಾಗದ ಪತ್ರಗಳನ್ನ ಭದ್ರ ಮಾಡಿಕೊಳ್ಳಲು ಹೋದವರಿಗೆ ಗಂಧದ ಕಳ್ಳತನ ಕೇಸ್ ಹಾಕಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಆಕ್ರೋಶದಿಂದ ಹೇಳಿದರು.
ಇನ್ನೂ ಈ ಹೋರಾಟದ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತಿ.ನಾ.ಶ್ರೀನಿವಾಸ್ ಅಧಿಕಾರಿಗಳು ಬಂದರೆ, ಸುಳ್ಳು ಕೇಸ್ ಹಾಕಲು ಮುಂದಾದರೆ ಗ್ರಾಮಸ್ಥರು ಕಟ್ಟಿಹಾಕಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗೋಣ ಎಂದು ಕರೆ ನೀಡಿದರು
ಇತ್ತ ವಕೀಲ ಚಂದ್ರೇಗೌಡರು ಕೋರ್ಟ್ ಆದೇಶದ ಪ್ರಕಾರ ಅರ್ಹ ಫಲಾನುಭವಿಗಳಿಗೆ ಕಾನೂನಿನಂತೆ ಒಂದು ಬಾರಿ ಹಕ್ಕುಪತ್ರ ಮತ್ತು ಪಹಣಿ ನೀಡಿದ ಮೇಲೆ ಅವನು ನೈಜ ರೈತನಾಗಿದ್ದಲ್ಲಿ ಹಕ್ಕುಪತ್ರ ರದ್ದು ಪಡಿಸುವ ಅಧಿಕಾರ ಯಾರಿಗೂ ಇಲ್ಲ. ಕೋರ್ಟ್ ಆದೇಶದ ನೆಪವೊಡ್ಡಿ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದು, ಯಾರೂ ಹೆದರಬೇಕಾಗಿಲ್ಲ ಎಂದರು
ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡ್ತಾ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿ, ಮಲ್ಲೀಗೇನಹಳ್ಳಿ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಏಕಾಏಕಿ ಅರಣ್ಯಪ್ರದೇಶ ಎಂದು ಹೇಳಿ ಒಕ್ಕಲೆಬ್ಬಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.