ಅಡಿಕೆ ಕೇಣಿ ಹಣದ ವಿಚಾರದಲ್ಲಿ ಇರಲಿ ಜಾಗ್ರತೆ! ಮಹಿಳೆಗೆ ₹45 ಲಕ್ಷ ರೂಪಾಯಿ ಮೋಸ
shivamogga vinobhanagara police station case

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 12, 2025
ಅಡಿಕೆ ಕೇಣಿ ಕೊಡುವಾಗಲು ಈಗೀಗ ಎಚ್ಚರ ವಹಿಸಬೇಕಾದ ಸಂದರ್ಭ ಬಂದಿದೆ. ಏಕೆಂದರೆ ಈ ಸಂಬಂಧ ದುಡ್ಡುಕಾಸಿನ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿಯೇ ಪ್ರಕರಣವೊಂದು ದಾಖಲಾಗಿದೆ. ಪ್ರಕರಣದಲ್ಲಿ ಅಡಿಕೆ ಕೇಣಿಯ ಹಣ 45 ಲಕ್ಷ ರೂಪಾಯಿಯನ್ನು ನೀಡದೆ ಭದ್ರಾವತಿಯ ದಂಪತಿ ಮೋಸ ಮಾಡಿದ್ದಷ್ಟೆ ಅಲ್ಲದೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ 70 ವರುಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಇಲ್ಲಿನ ಕರಿಯಣ್ಣನ ಬಿಲ್ಡಿಂಗ್ ನಲ್ಲಿರುವ ಮಹಿಳೆಯು 2021 ರಲ್ಲಿ ಭದ್ರಾವತಿಯ ನಂಜಾಪುರ ದಂಪತಿಗೆ ಹೊಳೆಹೊನ್ನೂರು ಸಮೀಪದಲ್ಲಿರುವ 9 ಎಕೆರೆ ಅಡಿಕೆ ತೋಟದ ಕೇಣಿ ನೀಡಿದ್ದರು. ಅದರಂತೆ ಕೊಯ್ಲು ಮುಗಿದ ಬಳಿಕ ದಂಪತಿ ಕೇಣಿಯ ರಶೀದಿ ನೀಡಿದ್ದಾರೆ. ಆದರೆ ಹಣವನ್ನು ಇದುವರೆಗೂ ನೀಡಿಲ್ಲವೆಂಬುದು ಆರೋಪ. ಈ ನಡುವೆ ಮಾತುಕತೆಗೆ ಬಂದಾಗೆಲೆಲ್ಲಾ ಹಲವು ಚೆಕ್ಗಳನ್ನು ಸಹ ದಂಪತಿ ನೀಡಿದ್ದು, ಅವುಗಳು ಬೌನ್ಸ್ ಆಗಿವೆ. ಈ ಬಗ್ಗೆ ಕಳೆದ ಜನವರಿಯಲ್ಲಿ ಮನೆಗೆ ಕರೆಸಿ ವಿಚಾರಿಸಿದಾಗ, ದಂಪತಿ ಹಿರಿಯ ಮಹಿಳೆಯ ಮೇಲೆ ಕೂಗಾಡಿ, ಅವರನ್ನು ಎಳೆದಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಸದ್ಯು ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಕೇಸು ದಾಖಲಿಸಿದ್ದಾರೆ.