ಶಿವಮೊಗ್ಗ : NSUI ವತಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಎಂಪಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ : ಕಾರಣವೇನು

prathapa thirthahalli
Prathapa thirthahalli - content producer

NSUI Protests in Shivamogga ಶಿವಮೊಗ್ಗ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ  ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರಗೀತೆ ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಹೇಳಿ  ರಾಷ್ಟ್ರಗೀತೆ’ಗೆ ಅಪಮಾನ ಮಾಡಿದ್ದು, ಅವರನ್ನು ಕೂಡಲೇ  ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಎನ್​ಎಸ್​ಯುಐ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿತ್ತು.

ನಗರದ ಶಿವಪ್ಪನಾಯಕ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಸಂಸದರನ್ನು ಕೂಡಲೇ ತಮ್ಮ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆ ವೇಳೆ “ರಾಷ್ಟ್ರಗೀತೆ ಒಪ್ಪದ ರಾಷ್ಟ್ರ ಧ್ವಜ ಒಪ್ಪದ ನಕಲಿ ದೇಶ ಪ್ರೇಮಿಗಳಿಗೆ ದಿಕ್ಕಾರ”, “ನಕಲಿ ದೇಶ ಭಕ್ತ ಕಾಗೇರಿಗೆ ದಿಕ್ಕಾರ” ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

NSUI Protests in Shivamogga ಪ್ರತಿಭಟನೆಗೆ ಕಾರಣವೇನು

ಪ್ರತಿಭಟನೆಗೆ ಮುಖ್ಯ ಕಾರಣವೆಂದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವೆಂಬರ್ 5ರಂದು ಹೊನ್ನಾವರದಲ್ಲಿ ಆಯೋಜಿಸಿದ್ದ ‘ಏಕತೆಗಾಗಿ ನಡಿಗೆ’ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ. ಅವರು, ‘ವಂದೇ ಮಾತರಂ’ ಗೀತೆಯು ರಾಷ್ಟ್ರಗೀತೆಯಾಗಬೇಕೆಂದು ಪ್ರತಿಪಾದಿಸುತ್ತಾ, ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ‘ಜನಗಣಮನ’ ರಾಷ್ಟ್ರಗೀತೆಯಾಗಿರುವುದು ಸರಿಯಲ್ಲ, ಏಕೆಂದರೆ ಅದನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಲಾಗಿತ್ತು ಎಂದು ಹೇಳಿದ್ದರು.

ರಾಜ್ಯದ ಶಿಕ್ಷಣ ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ಹುದ್ದೆಯಂತಹ ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸಿರುವ ವ್ಯಕ್ತಿ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಎನ್‌ಎಸ್‌ಯುಐ ಕಾರ್ಯಕರ್ತರು ಆರೋಪಿಸಿದ್ದಾರೆ. ಮನುವಾದಿ ಮನೋಭಾವದವರು ದೇಶದ ಸಂವಿಧಾನ, ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಒಪ್ಪುತ್ತಿಲ್ಲ, ಇವರೇ ಆಂತರಿಕವಾದ ನಿಜವಾದ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು, ರಾಷ್ಟ್ರಪತಿಗಳು ಕೂಡಲೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಲಯದ ಅಧ್ಯಕ್ಷರಾದ ಚೇತನ್ ಕೆ, ಯುವ ಮುಖಂಡರಾದ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಡ್ಡು, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷರಾದ ವಿಜಯ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

NSUI Protests in Shivamogga
NSUI Protests in Shivamogga
Share This Article