ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಶಾಸಕರು ರೆಬೆಲ್ ಆಗುತ್ತಾರೆ ಎಂಬ ಹೇಳಿಕೆಗಳ ಕುರಿತು ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಹಿರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಹೈಕಮಾಂಡ್ ತಕ್ಷಣವೇ ಒಂದು ಖಡಕ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಬ್ಬರನ್ನು ಇಳಿಸಿದರೆ ರೆಬೆಲ್ ಆಗುತ್ತಾರೆ, ಇನ್ನೊಬ್ಬರನ್ನು ಇಳಿಸಿದರೆ ರೆಬೆಲ್ ಆಗುತ್ತಾರೆ ಎಂಬ ಮಾತುಗಳು ಇವೆಲ್ಲ ಸಹಜವಾಗಿ ನಡೆಯುತ್ತವೆ. ಇದೆಲ್ಲ ಕೇವಲ ಊಹಾಪೋಹ. ಸದ್ಯದಲ್ಲೇ ಎಲ್ಲದಕ್ಕೂ ಇತಿಶ್ರೀ ಹಾಡಬೇಕು” ಎಂದು ಅವರು ಹೇಳಿದರು.
mla beluru ಹೈಕಮಾಂಡ್ ತೀರ್ಮಾನವೇ ಅಂತಿಮ
ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ನಾಯಕರು ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಯಾರು ಇರಬೇಕು, ಯಾರು ಇರಬಾರದು ಎಂಬುದನ್ನು ಹೈಕಮಾಂಡ್ ನಾಯಕರೇ ತೀರ್ಮಾನ ಮಾಡುತ್ತಾರೆ ಎಂದರು. ಈ ಗೊಂದಲಗಳು ಬೇಗ ಬಗೆಹರಿಯಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತದೆ. ನಮಗೆ ಕಾರ್ಯಕರ್ತರಿಗೆ ಸರಿಯಾದ ಉತ್ತರ ಕೊಡಲು ಆಗುತ್ತಿಲ್ಲ” ಎಂದು ಶಾಸಕ ಬೇಳೂರು ಆತಂಕ ವ್ಯಕ್ತಪಡಿಸಿದರು. ವಿರೋಧ ಪಕ್ಷದವರಿಗೆ ಆಹಾರ ಆಗದಂತೆ ಹೈಕಮಾಂಡ್ ಆದಷ್ಟು ಬೇಗ ಈ ಗೊಂದಲಕ್ಕೆ ತೆರೆ ಎಳೆಯಲಿ ಎಂದರು.
ಹಾಗೆಯೇ ಸಚಿವ ಸಂಪುಟ ಬದಲಾವಣೆ ಮಾಡುವುದಾದರೆ ಮಾಡಿ. ಯಾಕೆ ಮಾಡಲ್ಲ? ಮಾಡಿ. ನಿಮ್ಮ ಯಾವುದೋ ಗೊಂದಲದಿಂದ ಹಾಗೆಯೇ ಬಿಡಬೇಡಿ. ಬದಲಾವಣೆ ಅಥವಾ ವಿಸ್ತರಣೆ ಯಾವುದಾದರೂ ಮಾಡಿ, ಮಾಡ್ತೀರೋ? ಇಲ್ವೋ? ಒಂದು ಖಡಕ್ ನಿರ್ಧಾರ ಮಾಡಿ ಎಂದು ಅವರು ಹೈಕಮಾಂಡ್ಗೆ ಆಗ್ರಹಿಸಿದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾದರೆ ಮಂತ್ರಿಯಾಗುವ ಕನಸು ಕಾಣುವ ನನ್ನಂತಹ ಹಿರಿಯ ಶಾಸಕರಿಗೆ ಅವಕಾಶ ಸಿಗುತ್ತದೆ. ಅದನ್ನು ಯಾಕೆ ಹಾಳು ಮಾಡುತ್ತೀರಿ? ದಯವಿಟ್ಟು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದರು.
ಕೈ ಕಾಲು ಹಿಡಿದು ಸಾಕಾಗಿದೆ, ಇನ್ನು ಲಾಬಿ ಮಾಡಲ್ಲ
ನಾನು ಲಾಬಿ ಮಾಡೋದು ಮುಗಿದು ಹೋಗಿದೆ. ಇನ್ನು ಎಷ್ಟು ಲಾಬಿ ಮಾಡಲಿ? ನಾನು ಸಹ ಎಲ್ಲರನ್ನೂ ಭೇಟಿ ಮಾಡಿ ಅವರ ಕೈ ಕಾಲು ಹಿಡಿದಿದ್ದೆ. ಕೈ-ಕಾಲು ಹಿಡಿದು ಹಿಡಿದು ಸಾಕಾಗಿದೆ. ಇನ್ನು ಎಷ್ಟು ಹಿಡಿಯಲಿ? ಪದೇ ಪದೇ ಅದನ್ನೇ ಮಾಡಲು ಆಗುವುದಿಲ್ಲ ಎಂದರು.
mla beluru says CM Change Rumors Hurting Congress


