Malegaon blast : ಹಿಂದೂ ರಾಷ್ಟ್ರಕ್ಕೆ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು -ಶಾಸಕ ಎಸ್.ಎನ್. ಚನ್ನಬಸಪ್ಪ
ಶಿವಮೊಗ್ಗ: ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದೂ ರಾಷ್ಟ್ರಕ್ಕೆ ಕಾಂಗ್ರೆಸ್ ಪಕ್ಷ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
17 ವರ್ಷಗಳ ನಂತರ ಹೊರಬಂದ ನ್ಯಾಯಾಲಯದ ತೀರ್ಪು ಇಡೀ ಹಿಂದೂ ರಾಷ್ಟ್ರಕ್ಕೆ ಸಿಕ್ಕ ಜಯವಾಗಿದೆ ಅಂದಿನ ಯುಪಿಎ ಸರ್ಕಾರವು ಈ ಸ್ಪೋಟದ ನಂತರ ಹಿಂದೂ ಧರ್ಮವನ್ನು ಹಾಳು ಮಾಡುವ ಹುನ್ನಾರ ನಡೆಸಿತ್ತು. ದೇಶದ ಸರ್ವಾಂಗೀಣ ಉನ್ನತಿಯ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸಿತ್ತು. ಈ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಸೇರಿದಂತೆ ಹಲವರ ಜೀವನವನ್ನು ಹಾಳು ಮಾಡಲಾಯಿತು. ಹೋರಾಟದ ಮೂಲಕ ಜೀವನ ರೂಪಿಸಿಕೊಂಡಿದ್ದವರನ್ನು ಕಾಂಗ್ರೆಸ್ ಬಗ್ಗು ಬಡಿಯಿತು ಎಂದು ಆರೋಪಿಸಿದರು.
ಹಾಗೆಯೇ ಹಿಂದೂ ಭಯೋತ್ಪಾದಕ ಎಂಬ ಹೆಸರನ್ನು ಸೃಷ್ಟಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿತ್ತು. “ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕ ನಾಗಲು ಸಾಧ್ಯವಿಲ್ಲ ಎಂಬುದು ಈ ತೀರ್ಪಿನಿಂದ ಸತ್ಯವಾಗಿದೆ. ಈ ತೀರ್ಪು ರಾಷ್ಟ್ರಕ್ಕೆ ಶಕ್ತಿ ತುಂಬಿದಂತಾಗಿದೆ.ಆದರೆ, ಅಮಾಯಕರ ಜೀವನವನ್ನು ಹಾಳು ಮಾಡಿದ ಕಾಂಗ್ರೆಸ್ಗೆ ಯಾರು ಶಿಕ್ಷೆ ನೀಡುತ್ತಾರೆ ಎಂದು ಪ್ರಶ್ನಿಸಿದ ಅವರು ಷಡ್ಯಂತ್ರದಲ್ಲಿ ಭಾಗಿಯಾದ ಅಧಿಕಾರಿಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಾಲೆಗಾಂವ್ ಸ್ಫೋಟಕ್ಕೆ ಸೆಮಿ ಸಂಘಟನೆ ಕಾರಣವಾಗಿದ್ದರೂ, ಕಾಂಗ್ರೆಸ್ ಅದನ್ನು ಬಲಿಪಶು ಮಾಡದಿರಲು ನಿರ್ಧರಿಸಿತು. ಹಾಗಾಗಿ ಪ್ರಜ್ಞಾ ಸಿಂಗ್ ಅವರ ಅಭಿನವ ಭಾರತ ಸಂಘವನ್ನು ಕುತಂತ್ರದಿಂದ ಸಿಕ್ಕಿಸಲಾಯಿತು. ಮೋಹನ್ ಭಾಗವತ್ ಅವರನ್ನೂ ಈ ಪ್ರಕರಣದಲ್ಲಿ ಸಿಕ್ಕಿಸಲು ಪ್ರಯತ್ನಿಸಲಾಗಿತ್ತು. ಇದು ಯುಪಿಎ ಸರ್ಕಾರದ ಪಕ್ಷಗಳ ಮಾನಸಿಕತೆಯನ್ನು ತೋರಿಸುತ್ತದೆ. ಯುಪಿಎ ಸರ್ಕಾರ ಭಾರತವನ್ನು ಹಿಂದೂ ರಾಷ್ಟ್ರ ಎಂದು ಎಂದಿಗೂ ಭಾವಿಸಿಲ್ಲ. ಆದ್ದರಿಂದ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು ಎಂದು ಚನ್ನಬಸಪ್ಪ ಆಗ್ರಹಿಸಿದರು.


