SHIVAMOGGA| MALENADUTODAY NEWS | ಮಲೆನಾಡು ಟುಡೆ Mar 18, 2025
ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣವೊಂದರಲ್ಲಿ ಜಮೀನಿನಲ್ಲಿ ಗಾಂಜಾ ಬೆಳೆದ ಹಾಗೂ ಗಾಂಜಾ ಸಂಗ್ರಹಿಸಿದ ಅಪರಾಧಕ್ಕಾಗಿ 47 ವರ್ಷದ ವ್ಯಕ್ತಿ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ
ಸೊರಬ ತಾಲ್ಲೂಕು ಚಿಟ್ಟೂರು ಗ್ರಾಮದ ವಾಸಿ ನಿಂಗರಾಜ ಬಿನ್ ಶಿವಪ್ಪ (47) ತಮ್ಮ ಶುಂಠಿ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳಸಿದ್ದರು. ಈ ಸಂಬಂಧ ದೊರೆತ ಮಾಹಿತಿ ಆಧರಿಸಿ ಸೊರಬ ವಲಯ ಅಬಕಾರಿ ನಿರೀಕ್ಷಕರು ದಿನಾಂಕ 8-9-2022 ರಂದು ದಾಳಿ ಮಾಡಿದ್ದರು.
ದಾಳಿಯಲ್ಲಿ 5 ರಿಂದ 6 ಅಡಿ ಎತ್ತರದ ಗಿಡಗಳು ಹಾಗೂ 8 ರಿಂದ 10 ಗಾಂಜಾ ಗಿಡಗಳು ಒಟ್ಟು 20 ಹಸಿ ಗಿಡಗಳನ್ನು ಜಪ್ತಿ ಮಾಡಿದ್ದರು. ಬಳಿಕ 8(ಬಿ), 8(ಸಿ), 20(ಎ), 20(ಬಿ) ಎನ್ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಆರೋಪಿತನಾದ ನಿಂಗರಾಜ ಬಿನ್ ಶಿವಪ್ಪ ಇವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು, ಸರ್ಕಾರಿ ಅಭಿಯೋಜಕರಾದ ಎ.ಎನ್.ಸುರೇಶ್ ಕುಮಾರ್ ಪ್ರಕರಣದ ಕುರಿತಾಗಿ ವಾದ ಮಂಡಿಸಿದ್ದರು. ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಅಪರಾಧಿಗೆ 4 ವರ್ಷಗಳ ಕಠಿಣ ಕಾರಾಗೃಹವಾಸ ಸಜೆ ಮತ್ತು ರೂ.25 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಹೆಚ್ಚುವರಿ ಸಜೆ, ಹಾಗೂ 300 ಗ್ರಾಂ ಒಣ ಗಾಂಜಾ ಹೊಂದಿದ್ದಕ್ಕೆ 6 ತಿಂಗಳು ಕಠಿಣ ಕಾರಾಗೃಹವಾಸ ಸಜೆ ಮತ್ತು ರೂ. 5000 ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳು ಹೆಚ್ಚುವರಿ ಸಜೆಯನ್ನು ವಿಧಿಸಿದೆ.