SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಸುದ್ದಿ 1 : ಪತ್ನಿ ಕಾಟಕ್ಕೆ ಪತಿ ಸೂಸೈಡ್ : ಹೆಂಡತಿ ಕಿರುಕುಳದಿಂದ ಬೇಸತ್ತ ಗಂಡನೊಬ್ಬ, ಮದುವೆಯಾಗಿ ಮೂರೇ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಈ ಸಂಬಂಧ ಕಲಬುರಗಿಯಲ್ಲಿ ಪತ್ನಿ ಸೇರಿ ಮೂವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ್ ಬಿರಾದಾರ (30) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಮೇಘಾ, ಆಕೆಯ ತಾಯಿ ರೇಣುಕಾ ಹಾಗೂ ಅಕ್ಕ ಪ್ರಿಯಾ ವಿರುದ್ಧ ಕೇಸ್ ದಾಖಲಾಗಿದೆ. ಮನೆ ಕೆಲಸದ ವಿಷಯದಲ್ಲಿ ರಾಕೇಶ್ಗೆ ತಮ್ಮ ಮಾತು ಕೇಳದಿದ್ದರೇ ಪೊಲೀಸ್ ಕಂಪ್ಲೆಂಟ್ ಕೊಡುವುದಾಗಿ ಪತ್ನಿ ಹೆದರಿಸುತ್ತಿದ್ದಳಂತೆ. ಪದೇ ಪದೇ ಬೆದರಿಕೆ ಹೆಚ್ಚಾದ ಕಾರಣಕ್ಕೆ ರಾಕೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುದ್ದಿ 2 : ಸಂಬಂಧಿಕರ ಮನೆಗೆ ಬಂದು ಹೊರಡುವಾಗ ಆಘಾತ : ಶಿವಮೊಗ್ಗ ಜಿಲ್ಲೆಯ ನೆರೆಯ ತಾಲ್ಲೂಕು ನ್ಯಾಮತಿಯ ಹೊಸ ಜೋಗದ ಬಳಿ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿಯಾಗಿ, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚನ್ನಗಿರಿ ತಾಲ್ಲೂಕು ಗಾಣದಕಟ್ಟೆ ಗ್ರಾಮದ ಜಯರಾಮ ಎಂಬವರು ಮೃತಪಟ್ಟವರು. ಪತ್ನಿಯೊಂದಿಗೆ ಹೊಸಜೋಗ ಗ್ರಾಮದ ಸಂಬಂಧಿಕರ ಮನೆಗೆ ಬಂದು ವಾಪಸ್ ಹೋಗುವಾಗ ಶಿಕಾರಿಪುರದಿಂದ ಸವಳಂಗ ಕಡೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಜಯರಾಮರವರು ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಸುದ್ದಿ 3: ಮೆಜೆಸ್ಟಿಕ್ನಲ್ಲಿ ಶಿವಮೊಗ್ಗದ ವ್ಯಕ್ತಿ ಸಾವು : ಬೆಂಗಳೂರು ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ಟರ್ಮಿನಲ್ನಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮದ ಶಿವಮೊಗ್ಗ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.ಮೂಲತಃ ಪಶ್ಚಿಮ ಬಂಗಾಳದವರಾದ ಶಿವಮೊಗ್ಗದಲ್ಲಿ ನೆಲೆಸಿರುವ ಬಿಸ್ವದೇಸ್ ದಾಸ್ ಮೃತರು. ಇವರು ಶಿವಮೊಗ್ಗದಿಂದ ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಶಿವಮೊಗ್ಗ ಬಸ್ನಿಂದ ಇಳಿದು ಬಿಎಂಟಿಸಿ ಬಸ್ ಟರ್ಮಿನಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಹಾಸನಕ್ಕೆ ಹೋಗುತ್ತಿದ್ದ KSRTC ಬಸ್ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಾಸ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.