SHIVAMOGGA| MALENADUTODAY NEWS | ಮಲೆನಾಡು ಟುಡೆ Mar 21, 2025

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ಸಿಗಂದೂರು ಲಾಂಚ್ಗೆ ವಾಹನ ಹತ್ತಿಸುವ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಬೆಳಗಾವಿ ಮೂಲದ ಪ್ರವಾಸಿಗರು ದೂರು ಸಲ್ಲಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ವರದಿಯಾಗಿದೆ. ಈ ಸಂಬಂಧ ಇದೀಗ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ವಿಧಾನಪರಿಷತ್ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದರ ಜೊತೆಗೆ ರೌಡಿ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೊಳೆಬಾಗಿಲಿನಲ್ಲಿ ಪ್ರತಿನಿತ್ಯ ಪ್ರವಾಸಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈಚೆಗೆ ಬೆಳಗಾವಿ ಮೂಲದ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಅದರಿಂದಾಗಿ ಮಹಿಳೆಯ ಕೈ ಮೂಳೆ ಮುರಿದಿದೆ. ಆದರೂ ಯಾರೂ ರಕ್ಷಣೆಗೆ ಧಾವಿಸಲಿಲ್ಲ. ವೆಹಿಕಲ್ ದಾಟಿಸುವ ವಿಚಾರದಲ್ಲಿ ತಕರಾರು ಆಗಿದ್ದು ಅಲ್ಲಿನ ಗೂಂಡಾಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಈ ವಿಚಾರ ತಮ್ಮ ಬಳಿಗೆ ಬಂದಿತ್ತು. ಆನಂತರ ಸಿಗಂದೂರು ಧರ್ಮಾಧಿಕಾರಿ ಕೊನೆಗೆ ಸಂತ್ರಸ್ತರಿಗೆ ಕರೆಮಾಡಿ ಕ್ಷಮೆ ಕೇಳುತ್ತಾರೆ. ಅವರಿಗೆ ಸಾಗರದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡದಂತಹ ಪರಿಸ್ಥಿತಿ ಇದೆ. ಕಂಪ್ಲೆಂಟ್ ಕೊಟ್ಟವರಿಗೆ ಹೊಡೆಯುತ್ತಾರೆ ಅಂದರೆ, ಅಲ್ಲಿ ಎಂತಹ ಸನ್ನಿವೇಶ ಇದೆ ಎಂದು ಅರ್ಥಮಾಡಿಕೊಳ್ಳಿ ಎಂದು ಆಗರ ಜ್ಞಾನೇಂದ್ರವರು ಕಲಾಪದಲ್ಲಿ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರು ಸಹ ಅಸಹಾಯಕ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲದಿದ್ದರೇ ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸುವುದು ಹೇಗೆ ಎಂದು ಮಾಜಿ ಸಚಿವರು ಪೃಶ್ನಿಸಿದರಷ್ಟೆ ಅಲ್ಲದೆ ಪ್ರವಾಸಿಗರ ಮೇಲೆ ಗೂಂಡಾ ವರ್ತನೆ ತೋರುವವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದರು.

ವಿಷಯ ಅಂದರೆ, ಆರಗ ಜ್ಞಾನೇಂದ್ರವರ ಮಾತಿಗೆ ತುಮರಿ ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಸ್ಥಳೀಯರು ಆದ ಜಿಟಿ ಸತ್ಯನಾರಾಯಣ್ ವಿಷಯವನ್ನು ಸಮರ್ಪಕವಾಗಿ ತಿಳಿಯದೇ ಆರಗ ಜ್ಞಾನೇಂದ್ರರವರು ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಜಿಟಿ ಸತ್ಯನಾರಾಯಣ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ವಿವರ ಹೀಗಿದೆ
ಮಾನ್ಯ ಆರಗ ಜ್ಞಾನೇಂದ್ರರವರೆ ನಮಸ್ಕಾರ, ನಿನ್ನೆ ಸದನದಲ್ಲಿ ನೀವು ನಮ್ಮ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಲಾಂಚ್ ನಿಲ್ದಾಣದಲ್ಲಿ ಈಚೆಗೆ ನಡೆದ ಘಟನೆಯನ್ನ ಪ್ರಸ್ತಾಪಿಸಿ ಗೂಂಡಾಗಳು ಇದ್ದಾರೆ ಅಲ್ಲಿ ಎನ್ನುವ ಆರೋಪ ಮಾಡುತ್ತಾ ಪ್ರವಾಸಿಗರ ಮನಸಿನಲ್ಲಿ ಅದೆಷ್ಟು ಕ್ರೋಧ ನೋವು ಉಂಟಾಗಿರಬಹುದು ಎಂದು ಅಲವೆತ್ತುಕೊಂಡಿದ್ದೀರಿ. ಜ್ಞಾನೇಂದ್ರ ಸರ್. ನಿಮ್ಮಂತವರು ಯೋಚನೆ ಮಾಡಬೇಕಾದ ಕ್ರಮ ಬೇರೆ ಇದೆ. ಒಂದು ಸ್ಥಳದಲ್ಲಿ ಪದೇ ಪದೇ ಘಟನೆ ಯಾಕೆ ನಡೆಯುತ್ತಾ ಇದೆ ಎನ್ನುವ ಬಗ್ಗೆ. ಇದಕ್ಕೆ ಉತ್ತರ ಸರಳ. ಇರುವುದು ಮೂರು ಲಾಂಚ್ ಕೆಲವೊಮ್ಮೆ ಎರಡು. ದ್ವೀಪದ 17 ಸಾವಿರ ಜನರ ನಿತ್ಯ ಬದುಕಿನ ಭಾಗ ಈ ಲಾಂಚ್ ಗಳು. ಪ್ರವಾಸಿಗರು ಲಾಂಚ್ ಮೇಲೆ ಪಯಣ ಮಾಡಿ ಆ ಕಡೆ ಇರುವ ಜೀಪು ಅಥ್ವಾ ಬಸ್ ಪ್ರಯಾಣ ಮಾಡಿದಾಗ ಸಮಸ್ಯೆ ಆಗಿಲ್ಲ ಬದಲಿಗೆ ತಮ್ಮ ವಾಹನವನ್ನ ಲಾಂಚ್ ನಲಿ ಹಾಕಬೇಕು ಎಂದಾಗ ಸಮಸ್ಯೆ ಉಂಟಾಗುತ್ತದೆ. ದ್ವೀಪದ ಜನ ತಮ್ಮ ತಾಲ್ಲೂಕು ಕೇಂದ್ರವಾದ ಸಾಗರ ಹೋಗಿ ಪುನಃ ದ್ವೀಪಕ್ಕೆ ಮರಳಬೇಕು. ಸರಿ ಹೊತ್ತಿನಲಿ ಪ್ರವಾಸಿ ವಾಹನ ದಾಟಬೇಕು ಎನ್ನುವ ಹಟ. ಇಂತಹ ಹೊತ್ತಲ್ಲಿ ಜಗಳ ಆಗಿವೆ. ಹಲವು ಕೇಸ್ ಆಗಿವೆ. ಈ ಬಿಕ್ಕಟ್ಟು ಪರಿಹಾರ ಮಾಡಲು ಜಿಲ್ಲಾ ಆಡಳಿತ ಲಾಂಚ್ ನಿಲ್ದಾಣಗಳಲ್ಲಿ ಗ್ರಾಮ ಪಂಚಾಯ್ತಿ ಮೂಲಕ ಗೇಟ್ ನಿರ್ಮಾಣ ಮಾಡಿವೆ. ಗೇಟ್ ಉದ್ದೇಶ ಸ್ಥಳೀಯರಿಗೆ ಆದ್ಯತೆ ಕೊಡಿಸುವುದು. ಮೊನ್ನೆ ಘಟಣೆಯ ದಿನ ನಮ್ಮ ದ್ವೀಪದ ಪ್ರತಿಷ್ಠಿತ ಪಟೇಲ್ ಕುಟುಂಬದ ಮದುವೆ ಸಾಗರದಲ್ಲಿ. ಮುಗಿಸಿ ಬರುವ ಸಂಜೆ ವೇಳೆ ಮದುವೆ ಮನೆಯ ನಲವತ್ತು ವಾಹನ ಇದ್ದವು. ಅವರಿಗೆ ಆದ್ಯತೆ ನೀಡುವ ಕಾರಣ ನೀವು ಪರ ವಹಿಸುತ್ತಾ ಇರುವ ವಾಹನ ಮತ್ತು ವ್ಯಕ್ತಿಗಳು ಕಾಯಬೇಕಾಯಿತು. ಈ ಹೊತ್ತಿನಲ್ಲಿ ಗೇಟ್ ನಿರ್ವಹಣೆ ಇದ್ದ ಯುವಕನ ಮೇಲೆ ಮತ್ತು ಆದ್ಯತೆ ನೀತಿ ಬಗ್ಗೆ ನಿಮ್ಮವರು ಸಾರ್ವಜನಿಕ ಆಗಿ ಬಯ್ದಾಡಿದ್ದಾರೆ. ನಂತರ ಜಗಳ ಕೈ ಕೈ ಮಿಲಾಯಿಸಿಕೊಂಡ ಬಗ್ಗೆ ಪರಸ್ಪರ ದೂರು ದಾಖಲು ಆಗಿವೆ. ನಿಮ್ಮ ಭಾಷೆಯಲ್ಲಿ ಹೇಳಬೇಕು ಎಂದರೆ ” ಕ್ರಿಯೆಗೆ ತಕ್ಕ ಪ್ರತಿಕ್ರಿಯೆ” ನೀವು ಹೇಳಿದ ಹಾಗೆ ಕೈ ಮುರಿದಿದ್ದಾರೆ ಎಂಬುದು ಸುಳ್ಳು. ಯಾಕಂದರೆ ತುಮರಿ ಆಸ್ಪತ್ರೆಗೆ ಅವರು ದಾಖಲು ಆದಾಗ ನಾ ಖುದ್ದು ಭೇಟಿ ನೀಡಿದ್ದೇನೆ. ನೀವು ಸದನಕ್ಕೆ ನೀಡಿರುವ ಮಾಹಿತಿಗಳು ಏಕಪಕ್ಷೀಯ ಮತ್ತು ಅಪೂರ್ಣವಾದವುಗಳು. ತಮಗೆ ಗೊತ್ತಿರಲಿ ತಾವು ಗೃಹ ಮಂತ್ರಿ ಆದಾಗ ನಾವು ಖುಷಿ ಪಟ್ಟೆವು ಈ ಸಂಘರ್ಷ ತಪ್ಪಿಸಲು ಗೇಟ್ ಜತೆಗೆ ಸಿಗಂದೂರು ಭಾಗದಲ್ಲಿ ಒಂದು ಸಂಚಾರಿ ಪೋಲೀಸ್ ಸ್ಟೇಷನ್ ನೀಡಲು ತಾವು ಗೃಹ ಮಂತ್ರಿ ಆಗಿದ್ದಾಗ ನಾವು ವಿನಂತಿ ಮಾಡಿದೆವು. ದ್ವೀಪದ ಜನರು ಲಾಂಚ್ ನಲ್ಲಿ ಪ್ರವಾಸಿಗರಿಂದ ಪೆಟ್ಟು ತಿಂದ ಅಥ್ವಾ ಸಾಮಾನ್ಯ ಪ್ರಕರಣದಲ್ಲೂ ನ ದೂರು ನೀಡಲು 80 ಕೀ ಮೀ ಜೋಗ ಕ್ಕೆ ಕ್ರಮಿಸಬೇಕು. ಇದನ್ನು ತಪ್ಪಿಸಿ ಬ್ಯಾಕೋಡಲ್ಲಿ ಇರುವ ಹೊರ ಸ್ಟೇಶನ್ ನನ್ನ ಮೇಲ್ದರ್ಜೆ ಏರಿಸಿ ಎಂದು ನಿಮ್ಮ ಬಳಿ ಕೇಳಿ ಕೊಂಡೆವು. ಆಗಲಿಲ್ಲ. ಯಾಕೆ ಸರ್ ಮುಳುಗಡೆ ಸಂತ್ರಸ್ತರ ಭವಣೆ ಮತ್ತು ನೋವು ನಿಮಗೆ ಕಾಣಿಸಲೇ ಇಲ್ಲ. ಜನ ಸಮುದಾಯದ ನಮ್ಮ ಭವಣೆಗೆ ನೀವು ಅಧಿಕಾರ ಸ್ಥಾನದಲ್ಲಿ ಇದ್ದಾಗ ಸರಿಯಾಗಿ ಸ್ಪಂದಿಸದೇ ಈಗ ಘಟನೆಯೊಂದನ್ನು ನಿಮ್ಮ ಮೂಗಿನ ನೇರಕ್ಕೆ ಅರ್ಥ ವಿವರಣೆ ನೀಡುತ್ತಾ ಇದ್ದೀರಿ. ಅದರಲ್ಲೂ ಒಬ್ಬ ಮಾಜಿ ಗೃಹ ಸಚಿವರಾಗಿ. ಸಾಂದರ್ಭಿಕ ಘಟನೆಯಲ್ಲಿ ಇವೆಲ್ಲಾ ಜರುಗಿದೆ. ನೀವು ಗೂಂಡಾಗಳು ಮತ್ತು ರೌಡಿಗಳು ಎಂದು ಯಾರನ್ನು ಕರೆಯುತ್ತಾ ಇರುವ ಯಾವ ವ್ಯಕ್ತಿಗಳು ಇಲ್ಲಿ ಇಲ್ಲ. ಘಟನೆಯಲ್ಲಿ ಆರೋಪಿತ ವ್ಯಕ್ತಿಗಳ ಹಿನ್ನೆಲೆಯನ್ನ ಇಲಾಖೆಯಿಂದ ತರಿಸಿಕೊಂಡು ಮಾತಾಡಿ. ” ಯಾರೋ ಲೋಕಲ್ಲು, ಬೊ ಮಕ್ಕಳಾ. ನಾವು ಈ ರಾಜ್ಯದವರೇ, ಯಾಕೋ ಬಿಡಬೇಕು ನಿಮ್ಮ ಗಾಡಿನಾ. ನಿಮ್ಮ ಅಮ್ಮನ್ ” ಪ್ರವಾಸಿಗರ ಈ ಭಾಷೆ ಮತ್ತು ಧೋರಣೆಯೇ ಹಲವು ಘಟನೆಗೆ ಕಾರಣ ಆಗಿವೆ. ಇದನ್ನು ಪ್ರವಾಸಿಗರಿಗೆ ತಿಳಿಸಿ ಹೇಳಲು ಲಾಂಚ್ ನಿಲ್ದಾಣಗಳಲ್ಲಿ ತಲಾ ನಾಲ್ಕು ಸ್ವಯಂ ಸೇವಕರನ್ನು ಸಿಗಂದೂರು ದೇವಾಲಯ ನೇಮಿಸಬೇಕು ಎಂದು ಜಿಲ್ಲಾಧಿಕಾರಿಗಳು ಮಾನ್ಯ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಶಕದ ಹಿಂದೆ ಸೂಚನೆ ನೀಡಿದ್ದರು. ಅದನ್ನು ದೇವಾಲಯ ಪಾಲನೆ ಮಾಡಿದ್ದರೆ ಧರ್ಮದರ್ಶಿಗಳು ಕ್ಷಮೆ ಕೋರುವುದನ್ನ ತಪ್ಪಿಸಿಕೊಳ್ಳಬಹುದಿತ್ತು. ನಮ್ಮ ಧರ್ಮದರ್ಶಿಗಳು ಇಲ್ಲಿಯವರೆಗೆ ಸ್ಥಳೀಯರ ಮೇಲೆ ಹಲ್ಲೆ ಆದಾಗ ವಿಷಾದ ವ್ಯಕ್ತ ಪಡಿಸಿದ ಉದಾಹರಣೆ ಇಲ್ಲ. ಕೊನೆ ಮಾತು ತಾವು ಹೋಮ್ ಮಿನಿಸ್ಟರ್ ಆಗಿದ್ದಾಗ ಹೊಳೆಬಾಗಿಲು ಲಾಂಚ್ ನಿಲ್ದಾಣದಲ್ಲಿ ಕರ್ತವ್ಯ ನಿರತ ಪೊಲೀಸ್ ದಪೇದಾರ್ ರನ್ನು ಅಂಗಿ ಬಿಚ್ಚಿ ಹೊಡೆಯಲಾಯಿತು. ನಾವೆಲ್ಲ ಆಗ ನಿವೃತ್ತಿ ಅಂಚಲ್ಲಿ ಇದ್ದ ಪೊಲೀಸ್ ಪರ ನಿಂತೆವು. ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದೆವು. ಉಹುಂ ಆ ದಪೇದಾರ್ ಗೆ ನ್ಯಾಯ ಸಿಗಲಿಲ್ಲ. ದೂರು ದಾಖಲು ಆಗಲಿಲ್ಲ. ಕನಿಷ್ಠ ಕ್ಷಮೆ ಕೂಡಾ ಕೊರಲಿಲ್ಲ. ಕಾರಣ ಕೇಳಿದಾಗ ಹೋಂ ಮಿನಿಸ್ಟರ್ ಕಡೆಯವರು. ಆರಗ ಸರ್.. ಈ ಘಟನೆ ತಮಗೆ ನೆನಪು ಇದ್ಯ. ತಾವೇ ಪ್ರಭಾವ ಬೀರಿ ನಿಮ್ಮದೇ ಇಲಾಕೆ ನೌಕರನಿಗೆ ಆದ ಹಲ್ಲೆ ಗೆ ನ್ಯಾಯ ಕೊಡಿಸಲಿಲ್ಲ ಎಂದು ಜನ ಅಂದಿನಿಂದ ಮಾತಾಡಿಕೊಳ್ಳುತ್ತಾ ಇದ್ದಾರೆ. ಅದು ಕೂಡಾ ಇದೇ ಲಾಂಚ್ ನಿಲ್ದಾಣದಲ್ಲಿ. ಅಧಿವೇಶನ ಮುಗ್ಸಿ ಒಮ್ಮೆ ದ್ವೀಪಕ್ಕೆ ಲಾಂಚ್ ಮೇಲೆ ಬನ್ನಿ. ನಾವೆಲ್ಲಾ ಸಿಗುತ್ತೇವೆ. ಮಾತಾಡೋಣ. ಲಾಂಚ್ ಪ್ರಯಾಣದ ನಮ್ಮ ಆದ್ಯತೆ ಬಗ್ಗೆ ನಾನು ಧ್ವನಿ ಎತ್ತುವುದು ನಮ್ಮ ಹಕ್ಕು. ಈ ನೆಲದ ನ್ಯಾಯ ಕೇಳುವುದಕೆ ನಾವು ಹೆದರುವುದಿಲ್ಲ. ಮರೆತ ಮಾತು ತಾವು ಹೋಮ್ ಮಿನಿಸ್ಟರ್ ಆಗಿದ್ದಾಗ ನಡೆದ ದ್ವೀಪದ ಜೋಡಿ ಕೊಲೆ ಆರೋಪಿಗಳ ಬಂಧನ ಆಗಿಲ್ಲ. ಕೇಸ್ ಹಳ್ಳ ಹಿಡಿಯಲು ನಿಮ್ಮ ಅಸಮರ್ಥತೆ ಕಾರಣ ಎಂದು ದ್ವೀಪದ ಜನ ಮಾತಾಡಿಕೊಳ್ಳುತಾ ಇದ್ದಾರೆ. ಸದನದಲ್ಲಿ ಚರ್ಚೆ ಮಾಡುವಿರಾ…?ನಂಬಿಕೊಳ್ಳುವೆವು..
ಒಟ್ಟಾರೆ ಸಿಗಂದೂರು ಲಾಂಚ್ ಬಳಿ ನಡೆದ ಘಟನೆ ಸಂಬಂಧ ಇದೀಗ ಚರ್ಚೆ ಆರಂಭವಾಗಿದ್ದು, ನಡೆದ ಹಲ್ಲೆ ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದೆಯಾದರೂ, ನಡೆದಿದ್ದು ಏಕೆ? ಮತ್ತು ಅದರ ಹಿಂದಿನ ಘಟನೆಗಳು ಏನು ?ಮತ್ತು ಗೂಂಡಾ ಪದ ಬಳಕೆಯ ಸಂಬಂಧ ಚರ್ಚೆ ಜೋರಾಗುತ್ತಿದೆ.