SHIVAMOGGA| MALENADUTODAY NEWS | ಮಲೆನಾಡು ಟುಡೆ Apr 7, 2025

ಮೀನು ಹಿಡಿಯಲು ಹೋಗಿದ್ದ ಬಾಲಕರು ನಾಪತ್ತೆಯಾದ ಪ್ರಕರಣ ಸಂಬಂಧ ರಾತ್ರಿಯಿಡಿ ಹೈಡ್ರಾಮಾ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕುಮರಿ ನಾರಾಯಣಪುರದಲ್ಲಿ ನಡೆದಿದೆ.
ಏನಿದು ವಿಚಾರ:
ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಗ್ರಾಮದ ಐವರು ಮಕ್ಕಳು ಸಣ್ಣ ಚಾನಲ್ನಲ್ಲಿ ಮೀನು ಹಿಡಿಯುವ ಸಲುವಾಗಿ ತೆರಳಿದ್ದರು.ಆ ಬಳಿಕ ನಾಪತ್ತೆಯಾಗಿದ್ದರು. ಇದೀಗ ಇಡೀ ಊರು ಆತಂಕಕ್ಕೆ ಒಳಗಾಗಿತ್ತು. ಎಂಟರಿಂದ 14 ವರುಷದ ಮಕ್ಕಳು ನಾಪತ್ತೆಯಾಗಿರುವ ಸುದ್ದಿ ಊರಿಗೆಲ್ಲಾ ಹರಡಿ ಸುತ್ತಮುತ್ತಲಿನ ಜನರೆಲ್ಲರೂ ಸಣ್ಣ ಚಾನಲ್ ಬಳಿ ಹುಡುಕಾಟ ಆರಂಭಿಸಿದ್ದರು. ಹೊಳೆ ಹೊನ್ನೂರು ಪೊಲೀಸ್ ಠಾಣೆಯ ಪೊಲೀಶಸರು ಸಹ ಕಾರ್ಯಾಚರಣೆ ನಡೆಸಿದರು. ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.

ಈ ನಡುವೆ ಬೆಳಗಿನ ಜಾವ ಮಕ್ಕಳ ಸುಳಿವು ಸಿಕ್ಕಿದೆ . ಮಕ್ಕಳು ಮನೆಯಲ್ಲಿ ಹೇಳದೆನೆ ಮೀನು ಹಿಡಿಯಲು ಹೋಗಿದ್ದರು. ಈ ವಿಚಾರಕ್ಕೆ ಮನೆಯಲ್ಲಿ ಬೈಯ್ಯುವ ಕಾರಣಕ್ಕೆ ತೋಟವೊಂದರಲ್ಲಿ ಅಡಗಿ ಕುಳಿತಿದ್ದರು. ಆದರೆ ಮಕ್ಕಳ ಸುಳಿವು ಸಿಗದೇ ಊರಿನವರೆಲ್ಲ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ತೋಟದ ಮನೆಯೊಂದರಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ. ಅವರನ್ನು ಕರೆತರುವ ಸಂದರ್ಭದಲ್ಲಿ ಇಬ್ಬರು ಮಕ್ಕಳು ಮತ್ತೆ ತಪ್ಪಿಸಿಕೊಂಡಿದ್ದಾರೆ. ಸದ್ಯ ಅವರನ್ನು ಸಹ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ.