SHIVAMOGGA| MALENADUTODAY NEWS | ಮಲೆನಾಡು ಟುಡೆ

ರಾಷ್ಟ್ರೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಇದರ ನಡುವೆಯು ಬಿಜೆಪಿಯಲ್ಲಿ ಬಂಡಾಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ರೆಬೆಲ್ಸ್ ಟೀಂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿಯೇ ಸಭೆ ನಡೆಸಿದೆ.
ಇದುವರೆಗೂ ಸೊರಬದ ಮಾಜಿ ಶಾಸಕ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ನಡೆಯುತ್ತಿದ್ದ ಸಭೆ ಇದೀಗ ಬೆಂಗಳೂರಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್ ನಿವಾಸದಲ್ಲಿ ನಡೆದಿದೆ. ಈ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಜಿ ಎಂ ಸಿದ್ದೇಶ್ವರ್, ಬಿಪಿ ಹರೀಶ್, ಪ್ರತಾಪ್ ಸಿಂಹ ಪಾಲ್ಗೊಂಡಿದ್ದರು. ಸಭೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಿದ್ದು, ಉಚ್ಚಾಟನೆ ಬಳಿಕ ಒಂಟಿ ಎನಿಸಿದ್ದ ಯತ್ನಾಳ್ಗೆ ರೆಬೆಲ್ಸ್ ಬಲ ಇನ್ನಷ್ಟು ತೂಕ ತಂದುಕೊಟ್ಟಂತಿದೆ.
ಪೂರಕ ಎಂಬಂತೆ ಸಭೆಯಲ್ಲಿ ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಯತ್ನಾಳ್ ಉಚ್ಚಾಟನೆ ಆಘಾತ ತಂದಿದೆ. ಪಕ್ಷದ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರಿಗೆ ನೋವಾಗಿದೆ. ಈ ನಿರ್ಧಾರ ಪುನರ್ಪರಿಶೀಲಿಸಲು ವರಿಷ್ಠರನ್ನು ಕೋರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ. ನಾವ್ಯಾರೂ ಪಕ್ಷ ತೊರೆಯುವುದಿಲ್ಲ, ಬೇರೆ ಪಕ್ಷ ಕಟ್ಟುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಪಕ್ಷದ ಉಳಿವಿಗೆ ಹೋರಾಟ ನಡೆಸುತ್ತೇವೆ ಎಂದ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮೊದಲು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ನಿಲುವು ಎಂದರು
