SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025

ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್ಪಟ್ ಸುದ್ದಿಗಳ ವಿವರ ಹೀಗಿದೆ.
ಸುದ್ದಿ 1 : ಫೈನಾನ್ಸ್ ಕಿರುಕುಳ 112 ಎಂಟ್ರಿ
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ನಿವಾಸಿ ಮಹಿಳೆಯೊಬ್ಬರಿಗೆ ಫೈನಾನ್ಸ್ ಮಂದಿ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದರು. ಈ ವೇಳೆ ಮಹಿಳೆ 112 ಪೊಲೀಸರ ನೆರವು ಕೋರಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಕಿರುಕುಳ ನೀಡದಂತೆ ಫೈನಾನ್ಸ್ ಸಿಬ್ಬಂದಿಗೆ ತಾಕೀತು ಮಾಡಿದರಷ್ಟೆ ಅಲ್ಲದೆ, ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸುವ ಸಲುವಾಗಿ ಪ್ರಯತ್ನಿಸಿ ಎಂದು ಮಹಿಳೆಗೂ ಸಲಹೆ ನೀಡಿದರು.

ಸುದ್ದಿ 2 : ಮನೆಗೆ ಕಲ್ಲು, ಚುಡಾಯಿಸಿದ ಯುವಕ
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಯುವಕನೊಬ್ಬ ಹುಡುಗಿಯರನ್ನ ಚುಡಾಯಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿ, ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆತ ಪೊಲೀಸರನ್ನು ಕಂಡು ಎಸ್ಕೇಪ್ ಆಗಿದ್ದ. ಹೀಗಾಗಿ ಪೊಲೀಸರು ಯುವಕ ಪೋಷಕರನ್ನು ಕರೆದು ಯುವಕನಿಗೆ ಬುದ್ದಿ ಹೇಳುವಂತೆ ಎಚ್ಚರಿಸಿದರು. ಇನ್ನೊಂದು ಘಟನೆಯಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸರು, ಮನೆ ಮೇಲೆ ಕಲ್ಲು ಹೊಡೆಯುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಅಲ್ಲಿ ಆಟವಾಡುತ್ತಿದ್ದವರನ್ನು ವಿಚಾರಣೆ ನಡೆಸಿದರಷ್ಟೆ ಅಲ್ಲದೆ ಅಂತಹ ಕೃತ್ಯವೆಸಗದಂತೆ ಸೂಚನೆ ನೀಡಿದ್ದಾರೆ.
ಸುದ್ದಿ 3: ವೀರಭದ್ರೇಶ್ವರ ಬಸ್ ಡ್ರೈವರ್ಗೆ ದಂಡ
ಇತ್ತ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಾರ್ವಜನಿಕರು ಸಲ್ಲಿಸಿದ ಆನ್ಲೈನ್ ಕಂಪ್ಲೆಂಟ್ ಆಧರಿಸಿ ಸಿಟಿಬಸ್ ಡ್ರೈವರ್ ಒಬ್ಬರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಓಡಾಡುವ ಸಿಟಿ ಬಸ್ ವೀರಭದ್ರೇಶ್ವರ ಬಸ್ನ ಚಾಲಕ ಮೊಬೈಲ್ನಲ್ಲಿ ಮಾತನಾಡಿಕೊಂಡು ಬಸ್ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ಫೋಟೋ ಸಮೇತ ಕಂಪ್ಲೆಂಟ್ ಮಾಡಿದ್ದರು. ಇದನ್ನ ಪರಿಶೀಲಿಸಿದ ಪಿಎಸ್ಐ ತಿರುಮಲೇಶ್ರವರು ಬಸ್ನ್ನ ಠಾಣೆಗೆ ಕರೆತಂದು ಚಾಲಕರ ಮೇಲೆ 5000 ರೂಪಾಯಿಗಳ ದಂಡವನ್ನು ವಿಧಿಸಿದ್ದಾರೆ.
ಸುದ್ದಿ 4 ಸಾಗರ ಶಾಸಕರ ವಿರುದ್ಧ ದೂರು
ಸಾಗರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸಾಗರ ಶಾಸಕ ಗೋಪಾಲಕೃಷ್ಣ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಾಗರ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ರವರಿಗೆ ಮನವಿ ಸಲ್ಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಾಗರ ನಗರಸಭೆ ಗೇಟ್ ಬಳಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಶಾಸಕರು ನಿಂಧಿಸಿದ್ದಷ್ಟೆ ಅಲ್ಲದೆ ಗಿರೀಶ್ರವರ ಶರ್ಟ್ ಹಿಡಿದು ಎಳೆದರು ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಸುದ್ದಿ 5 : ಆಯನೂರು ಬಸ್ ಸ್ಟಾಪ್ ಬಳಿ ಅಪರಿಚಿತನ ಸಾವು
ಶಿವಮೊಗ್ಗ ತಾಲ್ಲೂಕು ಆಯನೂರು ಬಸ್ ನಿಲ್ದಾಣದ ಬಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.ನಿನ್ನೆ ದಿನ ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನು ನೀಡಲಾಗಿದೆ. ಇಲ್ಲಿನ ಬಸ್ ನಿಲ್ದಾಣದ ಬಳಿ ಕುಸಿದು ಬಿದ್ದ ವ್ಯಕ್ತಿಯೊಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟಿದ್ದರು. ಮೃತರ ಗುರುತು ಸಿಗದ ಹಿನ್ನೆಲೆಯಲ್ಲಿ ಪ್ರಕಟಣೆ ನೀಡಲಾಗಿದೆ. ಸುಮಾರು 55 ರಿಂದ 60 ವರ್ಷ ವಯೋಮಾನದ ವ್ಯಕ್ತಿ ಗುರುತು ಇದ್ದವರು ಕುಂಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182 262332, ಡಿ ವೈ ಎಸ್ ಪಿ ಶಿವಮೊಗ್ಗ 08182 261412, ಶಿವಮೊಗ್ಗ ಕಂಟ್ರೋಲ್ ರೂಂ 08182 261413 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.